ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಕಾರ್ಪೊರೇಟ್ ಪರ ನೀತಿಗಳ” ವಿರುದ್ಧ ತಿರುಚಿರಾಪಲ್ಲಿ ರೈಲು ತಡೆ ಪ್ರತಿಭಟನೆ ನಡೆಸಿದ್ದಾರೆ. 
ದೇಶ

Bharath Bandh: ಯಾವ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿತ್ತು, ಇಲ್ಲಿದೆ ಮಾಹಿತಿ-Video

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ, ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತವೆ ಮತ್ತು ನೌಕರರನ್ನು ನೇಮಕಾತಿ ಹಾಗೂ ವಜಾಗೊಳಿಸಲು ಉದ್ಯೋಗದಾತರಿಗೆ ಸುಲಭವಾಗಿಸುತ್ತದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ರಾಷ್ಟ್ರವಿರೋಧಿ ಕಾರ್ಪೊರೇಟ್ ಪರ ನೀತಿಗಳ” ವಿರುದ್ಧ ಕಾರ್ಮಿಕ ಸಂಘಟನೆಗಳು ಘೋಷಿಸಿದ ದೇಶವ್ಯಾಪಿ ಮುಷ್ಕರವು ವಿವಿಧ ರಾಜ್ಯಗಳಲ್ಲಿ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಸಾರಿಗೆ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳು ಪರಿಣಾಮಕ್ಕೊಳಗಾಗಿವೆ. ಹಲವು ರಾಜ್ಯಗಳಲ್ಲಿ ಬಂದ್ ಪರಿಣಾಮ ಕಂಡುಬಂದಿಲ್ಲ.

ಐಎನ್‌ಟಿಯುಸಿ (INTUC), ಎಐಟಿಯುಸಿ (AITUC), ಎಚ್‌ಎಂಎಸ್ (HMS), ಸಿಐಟಿಯು (CITU), ಎಐಯುಟಿಯುಸಿ (AIUTUC), ಸೇವಾ (SEWA), ಎಐಸಿಸಿಟಿಯು (AICCTU), ಎಲ್‌ಪಿಎಫ್ (LPF) ಮತ್ತು ಯುಟಿಯುಸಿ (UTUC) ಸೇರಿದಂತೆ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಇಂದು ಮುಷ್ಕರಕ್ಕೆ ಕರೆ ನೀಡಿದ್ದವು. ದೇಶದಾದ್ಯಂತ ಸುಮಾರು 30 ಕೋಟಿ ಕಾರ್ಮಿಕರನ್ನು ಈ ಮುಷ್ಕರಕ್ಕಾಗಿ ಸಂಘಟಿಸಲಾಗಿದೆ ಎಂದು ವೇದಿಕೆ ಹೇಳಿದೆ.

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ, ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತವೆ ಮತ್ತು ನೌಕರರನ್ನು ನೇಮಕಾತಿ ಹಾಗೂ ವಜಾಗೊಳಿಸಲು ಉದ್ಯೋಗದಾತರಿಗೆ ಸುಲಭವಾಗಿಸುತ್ತದೆ ಎಂದು ಆರೋಪಿಸಿದ್ದಾರೆ.

ಎಂಎನ್‌ಆರ್‌ಇಜಿಎ (MGNREGA) ನ್ನು ಪುನಃಸ್ಥಾಪಿಸುವಂತೆ ಹಾಗೂ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯಿದೆ, 2025 ನ್ನು ರದ್ದುಪಡಿಸುವಂತೆ ಬೇಡಿಕೆ ಮಾಡಿದ್ದಾರೆ. ಜೊತೆಗೆ ಮಸೂದೆ ಬೀಜ ಕಾಯಿದೆ (Draft Seed Bill), ವಿದ್ಯುತ್ ತಿದ್ದುಪಡಿ ಮಸೂದೆ (Electricity Amendment Bill) ಹಾಗೂ ‘ಸಸ್ಟೇನಬಲ್ ಹಾರ್ನೆಸಿಂಗ್ ಅಂಡ್ ಅಡ್ವಾನ್ಸ್‌ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ (ಶಾಂತಿ) ಕಾಯಿದೆ’ ನ್ನು ಹಿಂತೆಗೆದುಕೊಳ್ಳುವಂತೆ ಸಂಘಟನೆಗಳು ಆಗ್ರಹಿಸಿವೆ.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಅವರು ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ, ಒಡಿಶಾ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಿಂದ ಪ್ರತಿಭಟನೆಗಳ ವರದಿಗಳು ಬಂದಿವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ದೆಹಲಿಯ ಕೈಗಾರಿಕಾ ಪ್ರದೇಶಗಳಲ್ಲಿ ಮೆರವಣಿಗೆಗಳು ಆರಂಭವಾಗಿದ್ದು, ರಸ್ತೆಗಳ ಮೇಲೆ ಸಂಚಾರ ಪ್ರಮಾಣ ತುಸು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಷ್ಕರದಿಂದ ಬ್ಯಾಂಕಿಂಗ್, ವಿಮೆ, ಅಂಚೆ, ಸಾರಿಗೆ, ಆರೋಗ್ಯ, ಕಲ್ಲಿದ್ದಲು ಹಾಗೂ ಅಕಲ್ಲಿದ್ದಲು ಗಣಿಗಳು, ಅನಿಲ ಪೈಪ್‌ಲೈನ್ ಮತ್ತು ವಿದ್ಯುತ್ ಕ್ಷೇತ್ರಗಳು ಪರಿಣಾಮಕ್ಕೊಳಗಾಗಲಿವೆ ಎಂದು ತಿಳಿಸಿದ್ದಾರೆ.

ಒಡಿಶಾದಲ್ಲಿ ರಸ್ತೆ ತಡೆ; ಸಾರಿಗೆ ಸೇವೆಗಳು ಸ್ಥಗಿತ

ದೇಶವ್ಯಾಪಿ ಮುಷ್ಕರದ ಪರಿಣಾಮ ಒಡಿಶಾದಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದ್ದು, ಭುವನೇಶ್ವರ, ಕಟಕ್ ಮತ್ತು ರೌರ್ಕೆಲಾ ಮೊದಲಾದ ನಗರಗಳಲ್ಲಿ ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ.

ರಾಜಧಾನಿ ಭುವನೇಶ್ವರದಲ್ಲಿ ಪ್ರತಿಭಟನಾಕಾರರು ಸ್ಟೇಷನ್ ಸ್ಕ್ವೇರ್ ಬಳಿ ರಸ್ತೆ ತಡೆ ನಡೆಸಿ, ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಅಮಾ ಬಸ್ ಮತ್ತು ಆಟೋ ರಿಕ್ಷಾ ಸೇವೆಗಳು ಮುಷ್ಕರದಿಂದಾಗಿ ನಿಲ್ಲಿಸಲ್ಪಟ್ಟವು. ಪ್ರಮುಖ ವಾಣಿಜ್ಯ ಸಂಸ್ಥೆಗಳು ಕೂಡ ಬಂದ್ ಆಗಿದ್ದವು.

ಜಯದೇವ ವಿಹಾರ್ ಬಳಿ ರಾಷ್ಟ್ರೀಯ ಹೆದ್ದಾರಿ–16ರಲ್ಲಿ ಕೂಡ ಪ್ರತಿಭಟನೆ ನಡೆದಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಯಿತು.

ಜಾರ್ಖಂಡ್‌ನಲ್ಲಿ ಬ್ಯಾಂಕಿಂಗ್, ವಿಮೆ, ಕಲ್ಲಿದ್ದಲು ಕ್ಷೇತ್ರಗಳಿಗೆ ಬಂದ್ ಪರಿಣಾಮ

ಜಾರ್ಖಂಡ್‌ನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಹಲವು ಕಲ್ಲಿದ್ದಲು ಕಂಪನಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ (PSUs) ಗೇಟ್‌ಗಳ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬ್ಯಾಂಕಿಂಗ್, ವಿಮೆ ಮತ್ತು ಕಲ್ಲಿದ್ದಲು ಕ್ಷೇತ್ರಗಳು ಮುಷ್ಕರದಿಂದಾಗಿ ಪರಿಣಾಮಕ್ಕೊಳಗಾಗಿವೆ. ಎಡಪಂಥೀಯ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷವು ಈ ಮುಷ್ಕರಿಗೆ ಬೆಂಬಲ ನೀಡಿವೆ.

ಕೇರಳದಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತ; ಸಾರಿಗೆ ಸೇವೆಗಳು ಸ್ಥಗಿತ

ಕೇರಳದಲ್ಲಿಯೂ ಮುಷ್ಕರದಿಂದ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದ್ದು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಹೆಚ್ಚು ಸಂಕಷ್ಟಕ್ಕೊಳಗಾದರು. ಆಟೋ ರಿಕ್ಷಾ ಸಂಘಟನೆಗಳು ಕೂಡ ಮುಷ್ಕರದ ಅವಧಿಯಲ್ಲಿ ಸೇವೆ ನೀಡುವುದಿಲ್ಲ ಎಂದು ಘೋಷಿಸಿವೆ.

ನಾನು ರಾತ್ರಿ ಡ್ಯೂಟಿ ಮುಗಿಸಿ ಕಂಜಿರಮಟ್ಟೋಂಗೆ ಮನೆಗೆ ಹೋಗಲು ಬೆಳಗ್ಗೆ 6 ಗಂಟೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾಯುತ್ತಿದ್ದೇನೆ. ಆದರೆ ಯಾವುದೇ ಬಸ್ ಸಂಚರಿಸುತ್ತಿಲ್ಲ. ಇನ್ನೂ ಕೆಲವು ಗಂಟೆಗಳು ಕಾಯುವೆನು; ನಂತರ ರೈಲು ನಿಲ್ದಾಣಕ್ಕೆ ಹೋಗಿ ರೈಲು ಹಿಡಿಯಬೇಕಾಗುತ್ತದೆ ಎಂದು ಒಬ್ಬ ಪ್ರಯಾಣಿಕರನ್ನು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಸಾರಿಗೆ ಸೇವೆಗಳ ವ್ಯತ್ಯಯವು ಸರ್ಕಾರದ ಕಚೇರಿಗಳ ಹಾಜರಾತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಷ್ಕರದ ಕಾರಣದಿಂದ ಅಧಿಕಾರಿ ಅನುಮತಿಯಿಲ್ಲದೆ ಗೈರಾಗಿದ್ದರೆ, ಅದನ್ನು “ಡೈಸ್-ನಾನ್” ಎಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗೋವಾದಲ್ಲಿ ಮಿಶ್ರ ಪ್ರತಿಕ್ರಿಯೆ

ಗೋವಾದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಅನೇಕ ವಿಮಾ ಕಂಪನಿಗಳ ಕಚೇರಿಗಳು ಮುಚ್ಚಲ್ಪಟ್ಟಿದ್ದವು. ರಾಜ್ಯದ ಕೆಲವು ಕೈಗಾರಿಕಾ ಘಟಕಗಳ ಮೇಲೂ ಪರಿಣಾಮ ಬೀರಿತು.

ಮುಷ್ಕರ ಕರೆಗೆ ಬೆಂಬಲ ಸೂಚಿಸುವ ಸಲುವಾಗಿ ಕಾರ್ಮಿಕ ಸಂಘಟನೆಗಳು ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಿವೆ ಎಂದು ಎಐಟಿಯುಸಿ ಕಾರ್ಯದರ್ಶಿ ಸುಹಾಸ್ ನಾಯಕ್ ತಿಳಿಸಿದ್ದಾರೆ. ಆದರೆ ಅಗತ್ಯ ಸೇವೆಗಳ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ನಾಯಕ್ ಹೇಳಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸಿತು ಎಂದು ಅವರು ಹೇಳಿದರು. ಕಾರ್ಮಿಕ ಸಂಘಟನೆಗಳ ಸದಸ್ಯರು ರಾಜಧಾನಿ ಪಣಜಿಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ಕ್ಷೀಣ ಪ್ರತಿಕ್ರಿಯೆ

ದೇಶವ್ಯಾಪಿ ಮುಷ್ಕರಕ್ಕೆ ಪಶ್ಚಿಮ ಬಂಗಾಳದಲ್ಲಿ ಮಹತ್ತರ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ವಾಹನಗಳು ಎಂದಿನಂತೆ ಸಂಚರಿಸಿದವು. ರಾಜ್ಯ ಸರ್ಕಾರ ಹಾಗೂ ಖಾಸಗಿ ಕಚೇರಿಗಳಲ್ಲಿ ಸಾಮಾನ್ಯ ಹಾಜರಾತಿ ಕಂಡುಬಂತು.

ಸಿಪಿಐ(ಎಂ) ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಜಾದವ್ಪುರ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯಗಳ ಗೇಟ್‌ಗಳ ಮುಂದೆ ಪ್ರತಿಭಟನೆ ನಡೆಸಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭಾರೀ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಇಂದು 12ನೇ ತರಗತಿ ಪರೀಕ್ಷೆಗಳ ಮೊದಲ ದಿನವಾಗಿದ್ದರಿಂದ, ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ವಿವಿಧ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಸಂಚರಿಸಲು ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ಜೀತ್ ಕೌರ್ ಅವರು ಕನಿಷ್ಠ 30 ಕೋಟಿ ಕಾರ್ಮಿಕರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ಬಿಕ್ಲು ಶಿವ ಕೊಲೆ ಪ್ರಕರಣ: ಭೈರತಿ ಬಸವರಾಜ್​ಗೆ ಬಿಗ್ ಶಾಕ್​​; ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು‌ ಅರ್ಜಿ ವಜಾ

ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ದೊರೆ ಕೆಕೆ ಮಿಶ್ರಾ ಪುತ್ರನ ಬಂಧನ

'ಆ ದಿನದ ಒಪ್ಪಂದ ಮರೆತು ಬಿಟ್ರಾ'? ನಿಮ್ಮ ಸಮ್ಮುಖದಲ್ಲೇ ಮಾತಾಗಿತ್ತು ಅಲ್ವಾ? ಆಗುತ್ತೋ ಇಲ್ವೋ ಕ್ಲಿಯರ್​ ಮಾಡಿ; ಡಿಕೆ ಬ್ರದರ್ಸ್ ದುಂಬಾಲು!

ಜಾರ್ಖಂಡ್: ಶಾಲೆಯಲ್ಲಿ ಸರಸ್ವತಿ ಪೂಜೆಗೆ ಹಣ ನೀಡದ ವಿದ್ಯಾರ್ಥಿಗಳಿಗೆ 100 ಸಿಟ್ ಅಪ್ಸ್ ಶಿಕ್ಷೆ, ಊಟ ನಿರಾಕರಣೆ!

SCROLL FOR NEXT