ಉದಯಪುರ: ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ಹೇಳಿಕೆಯನ್ನು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಶನಿವಾರ ತೀವ್ರವಾಗಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು 'ಮಹಾಮೂರ್ಖ' ಎಂದು ಕರೆದಿದ್ದಾರೆ.
'ಈ ದೇಶದಲ್ಲಿ ಇಂತಹ 'ಮಹಾಮುರ್ಖ' ಎಲ್ಒಪಿಯನ್ನು ನಾನು ಎಂದಿಗೂ ನೋಡಿಲ್ಲ. ಭಾರತದ ಹತ್ತಿ ಬೆಳೆಯುವ ರೈತರನ್ನು ರಕ್ಷಿಸಲು ಕಳೆದ ಎಂಟು ವರ್ಷಗಳಲ್ಲಿ ಹತ್ತಿಯ ಮೇಲೆ ಶೇ 11 ರಷ್ಟು ಆಮದು ಸುಂಕ ವಿಧಿಸುವ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ರೈತರನ್ನು ರಕ್ಷಿಸಿದ ನಂತರ, ಸರ್ಕಾರವು ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಜಾಗತಿಕವಾಗಿ, ವಿಶೇಷವಾಗಿ ವಿಯೆಟ್ನಾಂನಂತಹ ದೇಶಗಳ ವಿರುದ್ಧ ಜವಳಿ ವಲಯವನ್ನು ಬೆಂಬಲಿಸಲು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುತ್ತಿದೆ' ಎಂದು ದುಬೆ ಎಎನ್ಐಗೆ ತಿಳಿಸಿದ್ದಾರೆ.
ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸಣ್ಣ ಪ್ರಮಾಣದ ರಫ್ತುದಾರರು ಶೂನ್ಯ ಸುಂಕವನ್ನು ಹೊಂದಿರುತ್ತಾರೆ. ಆದರೆ, ರಾಹುಲ್ ಗಾಂಧಿ ಅಸಂಬದ್ಧತೆಯನ್ನು ಹರಡುವಲ್ಲಿ ಮತ್ತು ಇತರರನ್ನು ಪ್ರಚೋದಿಸುವಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.
'ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಸಣ್ಣ ಪ್ರಮಾಣದ ರಫ್ತುದಾರರ ಸರಕುಗಳ ಮೇಲೆ ಶೂನ್ಯ ಶೇಕಡಾ ಸುಂಕ (ಆಮದು ತೆರಿಗೆ ಇಲ್ಲ) ವಿಧಿಸಲಾಗುವುದರಿಂದ ಅವರಿಗೆ ಲಾಭವಾಗುತ್ತದೆ. ಯಾರಾದರೂ ಅಸಂಬದ್ಧ ವಿಚಾರವನ್ನು ಹೇಳಲು, ಇತರರನ್ನು ಪ್ರಚೋದಿಸಲು ಮತ್ತು ದೇಶದ್ರೋಹದಲ್ಲಿ ತೊಡಗಿಸಿಕೊಳ್ಳುವುದನ್ನು ಕಲಿಯಲು ಬಯಸಿದರೆ, ಅಂಥವರು ರಾಹುಲ್ ಗಾಂಧಿಯಿಂದ ಕಲಿಯಬೇಕು' ಎಂದು ಅವರು ಹೇಳಿದರು.
ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಭಾರತದ ಹತ್ತಿ ರೈತರು ಮತ್ತು ಜವಳಿ ರಫ್ತುದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಮಾಡಿದ ಟೀಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಉಡುಪು ರಫ್ತು ಅಮೆರಿಕದಲ್ಲಿ ಶೇ 18 ರಷ್ಟು ಸುಂಕ ಎದುರಿಸುತ್ತಿವೆ. ಅದೇ ಸಮಯದಲ್ಲಿ, ಅಮೆರಿಕದಿಂದಲೇ ಹತ್ರಿ ಆಮದು ಮಾಡಿಕೊಂಡರೆ, ಬಾಂಗ್ಲಾದೇಶವು ಶೂನ್ಯ ಸುಂಕದಲ್ಲಿ ಅಲ್ಲಿಗೆ ಉಡುಪುಗಳನ್ನು ರಫ್ತು ಮಾಡಲು ಅವಕಾಶವಿದೆ. ಅಮೆರಿಕದ ಹತ್ತಿಯನ್ನು ಆಮದು ಮಾಡಿಕೊಳ್ಳುವುದರಿಂದ ದೇಶೀಯ ರೈತರಿಗೆ ಹಾನಿಯಾಗುತ್ತದೆ. ಆದರೆ, ಆಮದು ಮಾಡಿಕೊಳ್ಳದಿದ್ದರೆ ಜವಳಿ ಉದ್ಯಮಕ್ಕೆ ಹಾನಿಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಾಂಗ್ಲಾದೇಶವು ಭಾರತದಿಂದ ಹತ್ತಿ ಆಮದು ಕಡಿತ ಅಥವಾ ನಿಲ್ಲಿಸುವ ಸಾಧ್ಯತೆಯ ಬಗ್ಗೆ ಸೂಚನೆ ನೀಡುತ್ತಿದೆ. ಇದು ಭಾರತೀಯ ಉತ್ಪಾದಕರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಅವರು ಹೇಳಿದರು.