ಪುದುಚೇರಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಒಪ್ಪಂದದಲ್ಲಿ ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಶನಿವಾರ ಪ್ರತಿಪಾದಿಸಿದ್ದಾರೆ.
ಇಂದು ಪುದುಚೇರಿಯ ಕಾರೈಕಲ್ನಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ "ಪ್ರತಿದಿನ ಸುಳ್ಳು ಹೇಳುವ ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ" ಎಂದು ಆರೋಪಿಸಿದರು.
"ಜೋರಾಗಿ ಸುಳ್ಳು ಹೇಳುವುದು ಮತ್ತುಅದನ್ನು ಪುನರಾವರ್ತಿಸುವುದು ರಾಹುಲ್ ಗಾಂಧಿಯವರ ಪಾಲಿಸಿ. ಆದರೆ ಜನರು ನಿಮ್ಮದು ಸುಳ್ಳು ಉತ್ಪಾದನಾ ಕಾರ್ಖಾನೆ ಎಂದು ಗುರುತಿಸಿದ್ದಾರೆ" ಎಂದು ಟೀಕಿಸಿದರು.
ಎಫ್ಟಿಎ ಮತ್ತು ಸ್ಪಷ್ಟವಾಗಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿನ ನಿಬಂಧನೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ರೈತರು, ಮೀನುಗಾರರಿಗೆ "ಶೇಕಡಾ 100 ರಷ್ಟು ರಕ್ಷಣೆಯನ್ನು" ಖಚಿತಪಡಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ದಿವಂಗತ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದಲ್ಲಿ ರೈತರ ಹಿತಾಸಕ್ತಿಗಳನ್ನು "ಮಾರಾಟ" ಮಾಡಲಾಯಿತು ಎಂದು ಅಮಿತ್ ಶಾ ಆರೋಪಿಸಿದರು.
2029 ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರದಲ್ಲಿ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತದೆ ಎಂದು ಇದೇ ವೇಳೆ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.