ರಾಯ್ಪುರ: ರಾಯ್ಪುರದಿಂದ 80 ಕಿ.ಮೀ ದೂರದಲ್ಲಿರುವ ಧಮ್ತಾರಿ ಜಿಲ್ಲೆಯ ಖಾಪ್ರಿ ಬೈಪಾಸ್ ರಸ್ತೆಯ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) 201 ಬೆಟಾಲಿಯನ್(ಜಗ್ದಲ್ಪುರ)ನ ಮೂವರು ಸಿಬ್ಬಂದಿ ಮತ್ತು ಕಾರು ಚಾಲಕ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಜಗದಲ್ಪುರ(ಬಸ್ತರ್)ದಿಂದ ಹಿಂತಿರುಗುತ್ತಿದ್ದ ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು.
ಖಾಪ್ರಿ ಬೈಪಾಸ್ ಬಳಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಮತ್ತೊಬ್ಬ ಜವಾನ್ ಅಭಿಮಾನ್ ರೈ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಧಮ್ತಾರಿ ಎಸ್ಪಿ ತಿಳಿಸಿದ್ದಾರೆ.
"ಮೃತರನ್ನು ಸಬ್-ಇನ್ಸ್ಪೆಕ್ಟರ್ ಉಮೇದ್ ಸಿಂಗ್, ಹೆಡ್ ಕಾನ್ಸ್ಟೆಬಲ್ ಮುಖೇಶ್ ಕುಮಾರ್, ಕಾನ್ಸ್ಟೆಬಲ್ ರಾಜ್ಕುಮಾರ್ ಮತ್ತು ಚಾಲಕ ಹಿರಾಲಾಲ್ ನಗರ ಎಂದು ಗುರುತಿಸಲಾಗಿದೆ" ಎಂದು ಎಸ್ಪಿ ಹೇಳಿದ್ದಾರೆ.
ವರದಿಗಳ ಪ್ರಕಾರ, ಐದು ಜನಜಗದಲ್ಪುರ (ಬಸ್ತರ್)ದಿಂದ ಹಿಂತಿರುಗುತ್ತಿದ್ದಾಗ ಖಾಪ್ರಿ ಬೈಪಾಸ್ ಬಳಿ, ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದಿದೆ. ಈ ಐವರು ಸಿಬ್ಬಂದಿ ರಜೆ ಪಡೆದು ರಾಯ್ಪುರಕ್ಕೆ ತೆರಳುತ್ತಿದ್ದರು.
ಡಿಕ್ಕಿಯ ಶಬ್ದದಿಂದ ಬೆಚ್ಚಿಬಿದ್ದ ಪ್ರತ್ಯಕ್ಷದರ್ಶಿಗಳು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರು ಅವಶೇಷಗಳಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.