ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಪ್ರದಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಎಐ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರುವುದು ದೇಶದ ಮಹತ್ವಾಕಾಂಕ್ಷೆ ಹಾಗೂ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ಪೋವನ್ನು ಪ್ರಧಾನಿ ಮೋದಿ ಸೋಮವಾರ ಸಂಜೆ ಉದ್ಘಾಟಿಸಿದರು. ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಪ್ರಧಾನಿ, ಎಕ್ಸ್ಪೋದಲ್ಲಿ ಭಾಗವಹಿಸಿದ್ದ ಕಂಪನಿಗಳೊಂದಿಗೆ ಮಾತನಾಡಿದರು.
ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ನಾವೀನ್ಯಕಾರರು, ಸಂಶೋಧಕರು ಮತ್ತು ಟೆಕ್ ಉತ್ಸಾಹಿಗಳ ನಡುವೆ ಇಲ್ಲಿ ಇರುವುದು AI, ಭಾರತೀಯ ಪ್ರತಿಭೆ ಮತ್ತು ನಾವೀನ್ಯತೆಯ ಅಸಾಧಾರಣ ಸಾಮರ್ಥ್ಯದ ಒಂದು ನೋಟವನ್ನು ನೀಡುತ್ತದೆ. ಒಗ್ಗಟ್ಟಾಗಿ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ಪರಿಹಾರಗಳನ್ನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.
ಎಐ ಕುರಿತ ಚರ್ಚೆಗಾಗಿ ಜಗತ್ತನ್ನು ಒಟ್ಟುಗೂಡಿಸಲಾಗಿದೆ. ಭಾರತವು ಶೃಂಗದ ಆತಿಥ್ಯ ವಹಿಸಿದೆ. ಜಾಗತಿಕ ನಾಯಕರು, ಕೈಗಾರಿಕೋದ್ಯಮಿಗಳು, ನೀತಿ ನಿರೂಪಕರು, ಸಂಶೋಧಕರು ಮತ್ತು ತಂತ್ರಜ್ಞಾನ ಹಿಂಬಾಲಕರಿಗೆ ಸ್ವಾಗತ ಎಂದು ಮೋದಿ ಹೇಳಿದ್ದಾರೆ.
ಸರ್ವಜನ ಹಿತಾಯ: ಸರ್ವಜನ ಸುಖಾಯ: ಎಂದು ಧ್ಯೇಯವಾಕ್ಯದಡಿಯಲ್ಲಿ ಶೃಂಗಸಭೆ ಆಯೋಜಿಸಲಾಗಿದೆ. ಇದು ಮಾನವ ಕೇಂದ್ರೀತ ಪ್ರಗತಿಗಾಗಿ ಎಐ ಬಳಕೆ ಮಾಡುವ ನಮೆಲ್ಲರ ಬದ್ಧತೆಯ ಸಂಕೇತ ಎಂದಿದ್ದಾರೆ.