ನವದೆಹಲಿ: ತಾನು ಕರ್ಣಿ ಸೇನೆಯ ವ್ಯಕ್ತಿಯೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು "ಇತರ 25 ಕಾಂಗ್ರೆಸ್ ಸಂಸದರಿಗೆ" ಕೊಲೆ ಬೆದರಿಕೆ ಹಾಕುತ್ತಿರುವ ವಿಡಿಯೋಗೆ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಆರ್ಎಸ್ಎಸ್-ಬಿಜೆಪಿ ಪರಿಸರ ವ್ಯವಸ್ಥೆಯ "ಗೋಡ್ಸೆ ಕಾರ್ಖಾನೆ" ಎಂದು ತಿರುಗೇಟು ನೀಡಿದೆ.
ವಿರೋಧ ಪಕ್ಷವನ್ನು ರಾಕ್ಷಸೀಕರಿಸಲು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ, ವಿಶೇಷವಾಗಿ ರಾಹುಲ್ ಗಾಂಧಿಯವರ ವಿರುದ್ಧ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸುವ ಉದ್ದೇಶಪೂರ್ವಕ ಅಭಿಯಾನ ನಡೆಯುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಹುಲ್ ಗಾಂಧಿ ಮತ್ತು ಇತರ 25 ಕಾಂಗ್ರೆಸ್ ಸಂಸದರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿಯನ್ನು ಕೋಟಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬೋರ್ಖೇಡಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಹೇಳಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೋಟಾದ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಾನಿ ಗೌತಮ್ ಅವರು ಪಿಟಿಐಗೆ ತಿಳಿಸಿದ್ದಾರೆ.
ವಿಡಿಯೋದಲ್ಲಿ ರಾಜ್ ಸಿಂಗ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿರುವ ವ್ಯಕ್ತಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ನಿಂದಿಸಿದ್ದರಿಂದ 25 ಕಾಂಗ್ರೆಸ್ ಸಂಸದರ ವಿರುದ್ಧ ಎಲ್ಲಾ ಬಿಜೆಪಿ ಮತ್ತು ಕರ್ಣಿ ಸೇನಾ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದ್ದಾರೆ.
"ಇಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ಆ ಸಂಸದರ ಮನೆಗಳಿಗೆ ನುಗ್ಗಿ ಅವರ ಮನೆಗಳನ್ನು ಧ್ವಂಸ ಮಾಡುತ್ತೇವೆ. ಈ ಘಟನೆ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಡೆದಿದೆ ಎಂದು ನಾನು ನಂಬುತ್ತೇನೆ. ರಾಹುಲ್ ಗಾಂಧಿ, ಎಚ್ಚರಿಕೆಯಿಂದ ಕೇಳಿ: ಅಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ನಿಮ್ಮ ಮನೆಗೆ ನುಗ್ಗಿ ನಿಮಗೆ ಗುಂಡು ಹಾರಿಸುತ್ತೇವೆ" ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದಾರೆ.
"ಆ ಸಂಸದರನ್ನು 24 ಗಂಟೆಗಳ ಒಳಗೆ ಬಂಧಿಸಿದರೆ, ಪರವಾಗಿಲ್ಲ, ಇಲ್ಲದಿದ್ದರೆ ನಾವು ಅವರೆಲ್ಲರಿಗೂ ಗುಂಡು ಹಾರಿಸುತ್ತೇವೆ" ಎಂದು ಆರೋಪಿ ರಾಜ್ ಸಿಂಗ್ ಬೆದರಿಕೆ ಹಾಕಿದ್ದಾರೆ.
ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಈ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಆರ್ಎಸ್ಎಸ್-ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
"ಆರ್ಎಸ್ಎಸ್-ಬಿಜೆಪಿ ಪರಿಸರ ವ್ಯವಸ್ಥೆಯು 'ಗೋಡ್ಸೆ ಕಾರ್ಖಾನೆ'ಯಾಗಿದೆ. ರಾಹುಲ್ ಗಾಂಧಿ ಮತ್ತು '25 ಸಂಸತ್ ಸದಸ್ಯರ' ವಿರುದ್ಧ ಕರ್ಣಿ ಸೇನಾ ನೀಡಿರುವ ಬೆದರಿಕೆಯು ಪ್ರತ್ಯೇಕವಾದ ಸ್ಫೋಟವಲ್ಲ. ಇದು ಲೆಕ್ಕಾಚಾರ ಮತ್ತು ಕುತಂತ್ರದ ಭಾಗವಾಗಿದೆ" ಎಂದು ಖೇರಾ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.