ನವದೆಹಲಿ: ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಹೊಸದಾಗಿ ವೈಮಾನಿಕ ದಾಳಿ ನಡೆಸಿರುವುದನ್ನು ಭಾರತ ಭಾನುವಾರ ತೀವ್ರವಾಗಿ ಖಂಡಿಸಿದೆ.
ಇದು ತನ್ನ ಆಂತರಿಕ ವೈಫಲ್ಯವನ್ನು ಹೊರತರುವ ಪಾಕಿಸ್ತಾನದ ಮತ್ತೊಂದು ಪ್ಯತ್ನವಾಗಿದೆ ಎಂದು ಭಾರತ ಹೇಳಿದೆ. ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.
ಪವಿತ್ರ ರಂಜಾನ್ ತಿಂಗಳಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವುನೋವುಗಳಿಗೆ ಕಾರಣವಾದ ಅಫ್ಘಾನ್ ಪ್ರದೇಶದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಈ ವಿಷಯದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಣಧೀರ್ ಜೈಸ್ವಾಲ್, "ಇದು ಪಾಕಿಸ್ತಾನ ತನ್ನ ಆಂತರಿಕ ವೈಫಲ್ಯ ಬಹಿರಂಗದ ಮತ್ತೊಂದು ಪಯತ್ನವಾಗಿದೆ. ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ತನ್ನ ಬೆಂಬಲವನ್ನು ಮುಂದುವರೆಸುತ್ತದೆ ಎಂದರು.
ವೈಮಾನಿಕ ದಾಳಿಗೆ ಪಾಕಿಸ್ತಾನ ಸಮರ್ಥನೆ: ದೇಶದಲ್ಲಿ ಇತ್ತೀಚೆಗೆ ನಡೆದ ಬಂಡುಕೋರರ ದಾಳಿಗೆ ಪ್ರತೀಕಾರವಾಗಿ ಅಫ್ಘಾನಿಸ್ತಾನದಲ್ಲಿ ಕನಿಷ್ಠ ಏಳು ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ. ಸೇನಾ ದಾಳಿಯಲ್ಲಿ ಕನಿಷ್ಠ 70 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಅಫ್ಘಾನಿಸ್ತಾನವು ಭಯೋತ್ಪಾದನೆಯನ್ನು ಬಹಳ ಹಿಂದಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿದೆ. ಪಾಕಿಸ್ತಾನವು ತನ್ನ ನಾಗರಿಕರ ಜೀವ ಮತ್ತು ಆಸ್ತಿಯನ್ನು ಸುರಕ್ಷಿತವಾಗಿರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪಾಕಿಸ್ತಾನದ ಆಂತರಿಕ ಖಾತೆ ರಾಜ್ಯ ಸಚಿವ ತಲಾಲ್ ಚೌಧರಿ ಜಿಯೋ ನ್ಯೂಸ್ಗೆ ತಿಳಿಸಿದ್ದಾರೆ.