ಕಾಕಿನಾಡ: ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂ ಗ್ರಾಮದಲ್ಲಿ ಶನಿವಾರ ಪಟಾಕಿ ಉತ್ಪಾದನಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 20 ಜನ ಮೃತಪಟ್ಟಿದ್ದಾರೆ.
ಈ ಭೀಕರ ಸ್ಫೋಟದಲ್ಲಿ ಹಲವಾರು ಜನ ಗಾಯಗೊಂಡಿದ್ದು, ಬೆಂಕಿ ಹತ್ತಿರದ ಹಳ್ಳಿಗಳಿಗೂ ವ್ಯಾಪಿಸುವ ಭೀತಿ ಹುಟ್ಟಿಸಿತ್ತು.
ಇಂದು "ಭೂಕಂಪದಂತಹ" ಸ್ಫೋಟ ಎಂದು ಬಣ್ಣಿಸಿದ ಸ್ಥಳೀಯರು, ಸ್ಫೋಟದ ನಂತರ ದಟ್ಟವಾದ ಹೊಗೆ ಕಾಣಿಸಿಕೊಂಡಿತು ಮತ್ತು ಘಟಕದೊಳಗೆ ಸಂಗ್ರಹಿಸಲಾದ ಪಟಾಕಿಗಳು ಮಧ್ಯಂತರವಾಗಿ ಸ್ಫೋಟಗೊಳ್ಳುತ್ತಲೇ ಇದ್ದುದರಿಂದ ಮತ್ತಷ್ಟು ಭಯ ಹೆಚ್ಚಿಸಿತು ಎಂದು ಹೇಳಿದ್ದಾರೆ.
ಗಾಯಾಳುಗಳನ್ನು ಕಾಕಿನಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಮರ್ಲಕೋಟ ಮಂಡಲದ ವೆಟ್ಲಪಲೆಂ ಗ್ರಾಮದಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆ ಎಷ್ಟು ಪ್ರಬಲವಾಗಿತ್ತೆಂದರೆ, ಶವಗಳು ಹತ್ತಿರದ ಭತ್ತದ ಗದ್ದೆಗಳಿಗೆ ಎಸೆಯಲ್ಪಟ್ಟಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೇಕಡಾ 90 ರಿಂದ 100 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಏಳು ರೋಗಿಗಳನ್ನು ನಮ್ಮ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹೇಳಿದ್ದಾರೆ.
ಹಚ್ಚ ಹಸಿರಿನ ಭತ್ತದ ಗದ್ದೆಗಳ ನಡುವೆ ಸ್ಫೋಟದ ಭಯಾನಕ ದೃಶ್ಯ ಕಂಡುಬಂದಿದ್ದು, ಸ್ಥಳೀಯರು ರಸಗೊಬ್ಬರ ಚೀಲಗಳಿಂದ ಮಾಡಿದ ತಾಡಪಾಲದಿಂದ ಶವಗಳನ್ನು ಸ್ಥಳಾಂತರಿಸುತ್ತಿರುವುದು ಕಂಡುಬಂದಿದೆ.
ಇನ್ನು ಹತ್ತಿರದ ಗದ್ದೆಗಳಿಗೆ ಎಸೆಯಲ್ಪಟ್ಟ ದೇಹದ ಭಾಗಗಳನ್ನು ಪತ್ತೆಹಚ್ಚಲು ಪೊಲೀಸರು ಡ್ರೋನ್ಗಳನ್ನು ನಿಯೋಜಿಸಿದ್ದಾರೆ.
ವಿಜಯನಗರ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಸ್ಫೋಟದ ಕಾರಣ ಮತ್ತು ಪರಿಹಾರ ಕ್ರಮಗಳ ಕುರಿತು ವಿವರಗಳನ್ನು, ಪಡೆದರು. ಅಲ್ಲದೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
"ಕಾಕಿನಾಡ ಜಿಲ್ಲೆಯ ವೆಟ್ಲಪಲೆಂ ಗ್ರಾಮದಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟವು ನನಗೆ ನಿಜವಾಗಿಯೂ ನೋವುಂಟು ಮಾಡಿದೆ. ಈ ದುರಂತದಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವುದು ದುಃಖಕರ" ಎಂದು ನಾಯ್ಡು X ನಲ್ಲಿ ಪೋಸ್ಟ್ ಮಾಡಿದ್ದಾರೆ.