ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತುಷ್ಟು ಬಿಗಡಾಯಿಸಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ಮಾತುಕತೆ ಮತ್ತು ಸಂಪರ್ಕವಿಲ್ಲ. ಆದರೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರ ಅಂತ್ಯಸಂಸ್ಕಾರದ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಪಾಕಿಸ್ತಾನ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಅವರು ಮುಖಾಮುಖಿಯಾಗಿ ಹಸ್ತಲಾಘವ ಮಾಡಿದ್ದು, ಪಾಕಿಸ್ತಾನ ಇದನ್ನು ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ರಾಜತಾಂತ್ರಿಕ ಅಧಿಕಾರಿ ಸುರೇಶ್ ಕೆ ಗೋಯಲ್ ಅವರು, ಪಾಕಿಸ್ತಾನದ ವರದಿಗಳು ದೊಡ್ಡ ಜೋಕ್ ಎಂದಿದ್ದಾರೆ. ಅಲ್ಲದೆ ಪಾಕಿಸ್ತಾನಿ ನಾಯಕರು, ಭಾರತೀಯ ನಾಯಕರನ್ನು ನೋಡಿದಾಗಲೆಲ್ಲಾ ಅವರನ್ನು ಭೇಟಿ ಮಾಡಲು ಮುಗಿಬೀಳುತ್ತಾರೆ ಎಂದಿದ್ದಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಗೋಯಲ್, "ನನಗೆ ಅದನ್ನು ನೋಡಿ ನಗಬೇಕೆಂದು ಅನಿಸುತ್ತದೆ. ಪಾಕಿಸ್ತಾನ ನಮ್ಮ ಭೂಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪ್ರಸ್ತುತ ವಾತಾವರಣದಲ್ಲಿ, ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪರಾಕ್ರಮವನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಅವರು ನಿಜವಾಗಿಯೂ ಭಯೋತ್ಪಾದಕ ನೆಲೆಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ಅವುಗಳನ್ನು ಮರುಸ್ಥಾಪಿಸುತ್ತಿದ್ದಾರೆ ಅಂತ ನಾನು ಭಾವಿಸುವುದಿಲ್ಲ" ಎಂದಿದ್ದಾರೆ.
"ಪಾಕಿಸ್ತಾನದ ಸಚಿವರು, ಭಾರತೀಯ ನಾಯಕರನ್ನು ಭೇಟಿ ಮಾಡಲು ಮುಗಿಬೀಳುತ್ತಾರೆ. ಅವರು ಭಾರತೀಯ ನಾಯಕರನ್ನು ನೋಡಿದಾಗಲೆಲ್ಲಾ ಹಾಗೆ ಮಾಡುತ್ತಾರೆ ಮತ್ತು ಅದರಿಂದ ಏನೋ ಸಾಧಿಸಿದ್ದೇವೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಅಂತಹದ್ದೇ ಏನೂ ಅಲ್ಲಿ ಆಗಿರುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ನಿಧನದ ಹಿನ್ನೆಲೆಯಲ್ಲಿ ಢಾಕಾದಲ್ಲಿ ಆಯೋಜಿಸಲಾಗಿದ್ದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜಗತ್ತಿನ ವಿವಿಧ ರಾಷ್ಟ್ರಗಳ ಗಣ್ಯರು ಆಗಮಿಸಿದ್ದರು. ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಡಿಸೆಂಬರ್ 31 ರಂದು ಢಾಕಾ ತಲುಪಿದ್ದರು. ಇದೇ ವೇಳೆ ಪಾಕಿಸ್ತಾನವನ್ನು ಪ್ರತಿನಿಧಿಸಲು ಅಲ್ಲಿನ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಕೂಡ ಹಾಜರಿದ್ದರು. ಈ ವೇಳೆ ಜೈಶಂಕರ್ ಮತ್ತು ಅಯಾಜ್ ಸಾದಿಕ್ ನಡುವೆ ನಡೆದ ಸೌಜನ್ಯದ ಹಸ್ತಲಾಘವವು ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಭೇಟಿಯನ್ನು ಪಾಕಿಸ್ತಾನವು ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಭಾರತವು ಇದು ಕೇವಲ ಔಪಚಾರಿಕ ಭೇಟಿಯಷ್ಟೇ ಎಂದು ಸ್ಪಷ್ಟಪಡಿಸಿದೆ.