ನವದೆಹಲಿ: ನನ್ನ ಸರ್ಕಾರ "ನಿಜವಾದ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಹೇಳಿದ್ದಾರೆ.
ಇಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮುರ್ಮು, ಪ್ರಸ್ತುತ ಸರ್ಕಾರವು ದೇಶದ ಅಭಿವೃದ್ಧಿಯನ್ನು ತ್ವರಿತಗೊಳಿಸಿದೆ. ಮಹಿಳೆಯರು ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಒಳಗೊಂಡಂತೆ ಸಾಮಾಜಿಕ ಕಲ್ಯಾಣ ನೀತಿಗಳನ್ನು ಜಾರಿಗೆ ತರುವುದರಿಂದ ಹಿಡಿದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ ಎಂದು ಸರ್ಕಾರದ ಹಲವು ಸಾಧನೆಗಳನ್ನು ಪಟ್ಟಿ ಮಾಡಿದರು.
ದೇಶದ ಸುಮಾರು 95 ಕೋಟಿ ನಾಗರಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳು ಈಗ ಲಭ್ಯವಾಗಿವೆ ಮತ್ತು ಕಳೆದ 10 ವರ್ಷಗಳಲ್ಲಿ 25 ಕೋಟಿ ಭಾರತೀಯರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ರಾಷ್ಟ್ರಪತಿ ತಿಳಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರಚಾರ ಮಾಡಿದ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳು ಇಂದಿಗೂ ದೇಶದ ಜನತೆಗೆ ಸ್ಫೂರ್ತಿ ನೀಡುತ್ತಿವೆ. ನನ್ನ ಸರ್ಕಾರ ನಿಜವಾದ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.
ನಿಜವಾದ ಸಾಮಾಜಿಕ ನ್ಯಾಯ ಎಂದರೆ ದೇಶದ ಪ್ರತಿಯೊಬ್ಬ ನಾಗರಿಕನು ಯಾವುದೇ ತಾರತಮ್ಯವಿಲ್ಲದೆ ತಮ್ಮ ಹಕ್ಕಿನ ಪಾಲನ್ನು ಪಡೆಯುತ್ತಾನೆ ಎಂದು ಮುರ್ಮು ತಿಳಿಸಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಸರ್ಕಾರದ ದೃಷ್ಟಿಕೋನದಿಂದಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಈಗ ಎಲ್ಲಾ ಪ್ರಯೋಜನಗಳು ಲಭ್ಯವಾಗುತ್ತಿವೆ. ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಪ್ರತಿ ರೂಪಾಯಿ ಖರ್ಚು ಮಾಡುವುದನ್ನು ಸರ್ಕಾರ ಖಚಿತಪಡಿಸುತ್ತಿದೆ ಎಂದರು.
"ಕಳೆದ 10-11 ವರ್ಷಗಳಲ್ಲಿ, ಭಾರತವು ಪ್ರತಿಯೊಂದು ವಲಯದಲ್ಲಿ ತನ್ನ ಅಡಿಪಾಯವನ್ನು ಬಲಪಡಿಸಿದೆ" ಎಂದು ರಾಷ್ಟ್ರಪತಿಗಳು ಹೇಳಿದರು.
ಉತ್ಪಾದನಾ ವಲಯದಲ್ಲಿ, ನಿರ್ದಿಷ್ಟವಾಗಿ ಎಲೆಕ್ಟ್ರಾನಿಕ್ಸ್ ಹಾಗೂ ಕೃಷಿ ಸರಕುಗಳು ಮತ್ತು ಮೀನುಗಾರಿಕೆಯಲ್ಲಿ ಭಾರತದ ಬೆಳವಣಿಗೆಯನ್ನು ಮುರ್ಮು ಶ್ಲಾಘಿಸಿದರು.
ಮೂಲಸೌಕರ್ಯ ಅಭಿವೃದ್ಧಿಗೆ ರೈಲ್ವೆ ಒಂದು ಉತ್ತಮ ಉದಾಹರಣೆ
ಭಾರತೀಯ ರೈಲ್ವೆಯ ಸಾಧನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ ಮುರ್ಮು, ಇತ್ತೀಚಿನ ವರ್ಷಗಳಲ್ಲಿ ರೈಲು ಸಂಪರ್ಕ ಮತ್ತು ಸೌಲಭ್ಯಗಳು ಗಮನಾರ್ಹವಾಗಿ ಸುಧಾರಿಸಿವೆ ಎಂದು ಹೇಳಿದರು.
ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಿರುವ ಭಾರತೀಯ ರೈಲ್ವೆ ಶೀಘ್ರದಲ್ಲೇ ಶೇಕಡಾ 100 ರಷ್ಟು ವಿದ್ಯುದೀಕರಣವನ್ನು ಸಾಧಿಸಲಿದೆ ಎಂದು ಮುರ್ಮು ತಿಳಿಸಿದರು.
ಅಜಿತ್ ಪವಾರ್ ನಿಧನಕ್ಕೆ ಸಂತಾಪ
ಇಂದು ಬೆಳಗ್ಗೆ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ರಾಷ್ಟ್ರಪತಿ ಮುರ್ಮು ಅವರು ಸಂತಾಪ ಸೂಚಿಸಿದರು.
"ಅಜಿತ್ ಪವಾರ್ ಅವರ ಅಕಾಲಿಕ ನಿಧನವು ತುಂಬಲಾಗದ ನಷ್ಟವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಸಹಕಾರಿ ವಲಯದಲ್ಲಿ ಅವರ ವಿಶೇಷ ಕೊಡುಗೆಗಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು" ಎಂದು ರಾಷ್ಟ್ರಪತಿಗಳು ಹಿಂದಿಯಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.