ನಾಡಿಯಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಟಿಎಂಸಿ ಶಾಸಕಿ ಅಲಿಫಾ ಅಹ್ಮದ್ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಮ್ಮ ಮೇಲೆ ಮೊಟ್ಟೆಗಳನ್ನು ಎಸೆದು ಘೋಷಣೆಗಳನ್ನು ಕೂಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಆರೋಪಿಸಿದ್ದಾರೆ.
ಅಹ್ಮದ್ ಅವರ ನಿವಾಸದಲ್ಲಿ ನಡೆದ ಟಿಎಂಸಿ ಸಭೆಯಲ್ಲಿ ಭಾಗವಹಿಸಲು ಮೊಯಿತ್ರಾ ಕಾಲಿಗಂಜ್ನ ಪಲಾಶಿಗೆ ತೆರಳಿದ್ದರು. ಈ ವೇಳೆ ಹೊರಗೆ ಜಮಾಯಿಸಿದ್ದ ಪ್ರತಿಭಟನಾಕಾರರ ಗುಂಪು 'ಗೋ ಬ್ಯಾಕ್' ಘೋಷಣೆಗಳನ್ನು ಕೂಗಿತು. ಅಲ್ಲದೆ ಮೊಟ್ಟೆಗಳನ್ನು ಎಸೆದು, 'ಚೋರ್' 'ಚೋರ್' ಎಂದು ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಿದ್ದಾರೆ.
ಮೊಯಿತ್ರಾ ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ಹೇಳಿದ್ದಾರೆ.
ಆದಾಗ್ಯೂ, ಪಿಟಿಐಗೆ ವಿಡಿಯೋದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ.
"ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಬಿಜೆಪಿ ಈಗ ನನ್ನ ಮೇಲೆ ದಾಳಿ ಮಾಡಲು ಯೋಜಿಸಿದೆ. ಇವರು ಸಾಮಾನ್ಯ ಜನ ಅಲ್ಲ; ಅವರು ಬಿಜೆಪಿ ಕಾರ್ಯಕರ್ತರು" ಎಂದು ಆರೋಪಿಸಿದ್ದಾರೆ.
ಪೊಲೀಸರು ಮತ್ತು ಕೇಂದ್ರ ಭದ್ರತಾ ಸಿಬ್ಬಂದಿ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ತಲುಪಿ ಅವರೊಂದಿಗೆ ಮಾತನಾಡಿದ ನಂತರ ಪ್ರತಿಭಟನಾಕಾರರನ್ನು ಚದುರಿಸಲಾಯಿತು ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.