ನವದೆಹಲಿ: ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಇಂದು ಪಾಕಿಸ್ತಾನಕ್ಕೆ ಪ್ರಬಲ ಸಂದೇಶ ರವಾನಿಸಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದನ್ನು ನಿಲ್ಲಿಸಿದಿದ್ದರೆ ಸಿಂಧೂ ಜಲ ಒಪ್ಪಂದ (IWT) ಮೇಲಿನ ಅಮಾನತು ಮುಂದುವರೆಯುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪುನರುಚ್ಚರಿಸಿದೆ.
ಸಿಂಧೂ ಜಲ ಒಪ್ಪಂದದ ಕುರಿತು ಭಾರತದ ನಿಲುವು ಸ್ಥಿರವಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಸಿಂಧೂ ಜಲ ಒಪ್ಪಂದವನ್ನು ಪ್ರಸ್ತುತ ತಡೆಹಿಡಿಯಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇದೇ ವೇಳೆ ತೀಸ್ತಾ ನದಿ ಯೋಜನೆಯ ಬಗ್ಗೆಯೂ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಪ್ರಸ್ತಾವಿತ ತೀಸ್ತಾ ನದಿ ಯೋಜನೆಯ ಕುರಿತು ಭಾರತ ಈಗಾಗಲೇ ಬಾಂಗ್ಲಾದೇಶಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ರಣಧೀರ್ ಜೈಸ್ವಾಲ್ ಹೇಳಿದರು.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿತು. ಭಾರತದ ಈ ಬಲವಾದ ನಡೆ ಪಾಕಿಸ್ತಾನವನ್ನು ನಡುಗಿಸಿದೆ. ಈ ವಾರದ ಆರಂಭದಲ್ಲಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಭಾರತಕ್ಕೆ ಬೆದರಿಕೆ ಹಾಕಿದರು. New India ನೀರನ್ನು ಕಾರ್ಯತಂತ್ರದ ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದರು.
ತೀಸ್ತಾ ಯೋಜನೆಯ ಬಗ್ಗೆ ಭಾರತದ ನಿಲುವು
ತೀಸ್ತಾ ನದಿ ಸಮಗ್ರ ನಿರ್ವಹಣೆ ಮತ್ತು ಪುನಃಸ್ಥಾಪನೆ ಯೋಜನೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಣಧೀರ್ ಜೈಸ್ವಾಲ್, ಬಾಂಗ್ಲಾದೇಶದಲ್ಲಿನ ಯೋಜನೆಗಳಿಗೆ ಭಾರತದ ಅಭಿವೃದ್ಧಿ ನೆರವು ಪರಸ್ಪರ ಒಪ್ಪಿದ ಮಾರ್ಗಸೂಚಿಯನ್ನು ಆಧರಿಸಿದೆ. ಇದನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು. ತೀಸ್ತಾ ನದಿ ಯೋಜನೆಯ ಕುರಿತು ನಮ್ಮ ಅಭಿಪ್ರಾಯಗಳನ್ನು ಈಗಾಗಲೇ ಬಾಂಗ್ಲಾದೇಶಕ್ಕೆ ತಿಳಿಸಲಾಗಿದೆ. ತೀಸ್ತಾ ಸಮಸ್ಯೆಗೆ ನಮ್ಮ ಒಟ್ಟಾರೆ ವಿಧಾನದಲ್ಲಿ ನಾವು ಎಲ್ಲಾ ಸಂಬಂಧಿತ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಜೈಸ್ವಾಲ್ ಹೇಳಿದರು.
ತೀಸ್ತಾ ಮತ್ತು ಭಾರತದ ಮೂಲಕ ಹರಿಯುವ ಇತರ ಗಡಿಯಾಚೆಗಿನ ನದಿಗಳ ನಿರ್ವಹಣೆಗೆ ಬಾಂಗ್ಲಾದೇಶ ಮತ್ತು ಚೀನಾ ಸಹಕರಿಸಲು ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ವಿದೇಶಾಂಗ ಸಚಿವಾಲಯದ ಈ ಹೇಳಿಕೆಗಳು ಬಂದಿವೆ.