ನವದೆಹಲಿ: ಟೆಲಿಗ್ರಾಂ ಮೆಸೇಜಿಂಗ್ ವೇದಿಕೆಯಲ್ಲಿ ಪೈರಸಿ ಮಾಡಲಾದ ಸಿನಿಮಾಗಳು, ಒಟಿಟಿ (OTT) ಕಟೆಂಟ್ ಗಳು ಹಾಗೂ ಇತರೆ ಹಕ್ಕುಸ್ವಾಮ್ಯ ಹೊಂದಿರುವ ಆಡಿಯೋ-ವಿಷುವಲ್ ಕಟೆಂಟ್ ಗಳ ಅಕ್ರಮ ಪ್ರಸಾರವನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟೆಲಿಗ್ರಾಂಗೆ 15 ದಿನಗಳೊಳಗೆ 'ಆಕ್ಷನ್ ಟೇಕನ್ ರಿಪೋರ್ಟ್' (ಎಟಿಆರ್) ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.
ಅಂತೆಯೇ ಪ್ರತ್ಯೇಕವಾಗಿ ಪೈರಸಿ ಕಟೆಂಟ್ ಗಳನ್ನು ತೆಗೆದುಹಾಕುವ ಕ್ರಮದಿಂದ ಹೊರಬಂದು, ಪೈರಸಿ ತಡೆಗಟ್ಟುವ ಹೊಣೆಗಾರಿಕೆಯನ್ನು ನೇರವಾಗಿ ಡಿಜಿಟಲ್ ವೇದಿಕೆಗಳ ಮೇಲೆಯೇ ನಿಗದಿಪಡಿಸುವ ಹೊಸ ನಿಲುವನ್ನು ಸರ್ಕಾರ ಅಳವಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯವು ಟೆಲಿಗ್ರಾಂಗೆ ನೀಡಿರುವ ನೋಟಿಸ್ನಲ್ಲಿ, ಹಕ್ಕುಸ್ವಾಮ್ಯ ಉಲ್ಲಂಘನೆ ಕೇವಲ ನಾಗರಿಕ (ಸಿವಿಲ್) ಉಲ್ಲಂಘನೆಯಲ್ಲ, ಅದು ಹಕ್ಕುಸ್ವಾಮ್ಯ ಕಾಯ್ದೆ, 1957 ಹಾಗೂ ಸಿನಿಮಾಟೋಗ್ರಾಫ್ ಕಾಯ್ದೆ, 1952ರ ಅಡಿಯಲ್ಲಿ ಅಪರಾಧವೂ ಆಗಿದೆ ಎಂದು ಸ್ಪಷ್ಟಪಡಿಸಿದೆ.
"ಪೈರಸಿ ನಡೆಸುವ ಪ್ರತಿಯೊಂದು ಚಾನೆಲ್ ಅನ್ನು ಸರ್ಕಾರವೇ ಗುರುತಿಸಿ ತಿಳಿಸುವವರೆಗೆ ಟೆಲಿಗ್ರಾಂ ಕಾಯಲು ಸಾಧ್ಯವಿಲ್ಲ. ಚಾನೆಲ್ವಾರು ಕಟೆಂಟ್ ಗಳನ್ನು ತೆಗೆದುಹಾಕುವ ಪ್ರತಿಕ್ರಿಯಾತ್ಮಕ ವಿಧಾನ ಮಾತ್ರ ಸಾಕಾಗುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಐಟಿ ನಿಯಮಗಳು, 2021ರ ಪ್ರಕಾರ ಮಧ್ಯವರ್ತಿಯಾಗಿ (Intermediary) ವೇದಿಕೆ ಅನುಸರಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಇದು ಸಮರ್ಪಕವಾಗಿ ತೋರಿಸುವುದಿಲ್ಲ," ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೆಟಾಗೂ ನೋಟಿಸ್ ನೀಡಿದ್ದ ಸರ್ಕಾರ
ಇತ್ತೀಚೆಗೆ ಕೇಂದ್ರ ಸರ್ಕಾರ ಮೆಟಾ ವಿರುದ್ಧವೂ ನಿಯಂತ್ರಣ ಕ್ರಮಗಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಈ ನೋಟಿಸ್ ಹೊರಬಿದ್ದಿದೆ. ಕಳೆದ ಬುಧವಾರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ವಾಟ್ಸ್ಆ್ಯಪ್ನ ಪ್ರಸ್ತಾವಿತ ಯೂಸರ್ನೇಮ್ ವೈಶಿಷ್ಟ್ಯದ ಕುರಿತು ಮೆಟಾಗೆ ನೋಟಿಸ್ ನೀಡಿತ್ತು.
ಬಳಿಕ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಉತ್ತೇಜಿಸುವ ಜಾಹೀರಾತುಗಳು ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಮೆಟಾ ಅಧಿಕಾರಿಗಳನ್ನು ಹಾಜರಾಗುವಂತೆ ಸಮನ್ಸ್ ನೀಡಲು ನಿರ್ಧರಿಸಿತ್ತು.
ಇದರ ಜೊತೆಗೆ, ಸಿನಿಮಾ ನಿರ್ಮಾಪಕರು, ಒಟಿಟಿ ವೇದಿಕೆಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳಿಗಾಗಿ ಟೆಲಿಗ್ರಾಂ ಹೊಂದಿರುವ ಕುಂದುಕೊರತೆ ನಿವಾರಣಾ ವ್ಯವಸ್ಥೆ (Grievance Redressal Mechanism) ಕುರಿತು ವಿವರಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ನಿಯಮಗಳ ಪ್ರಕಾರ ಮಧ್ಯವರ್ತಿಯಾಗಿ ಟೆಲಿಗ್ರಾಂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ ಎಂಬುದನ್ನು ವೇದಿಕೆಗೆ ಮತ್ತೊಮ್ಮೆ ನೆನಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
"ಪೈರಸಿ ಮಾಡಲಾದ ಕಟೆಂಟ್ ಗಳು ನಿರಂತರವಾಗಿ ಲಭ್ಯವಾಗುವುದು, ಸಮರ್ಪಕ ಪಾಲನೆ ಇಲ್ಲದಿರುವುದು ಅಥವಾ ಅಪೂರ್ಣ ಉತ್ತರ ನೀಡುವುದು ಮುಂದಿನ ಕಾನೂನು ಪರಿಶೀಲನೆ ಹಾಗೂ ಕ್ರಮಕ್ಕೆ ಕಾರಣವಾಗಬಹುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದ ಸೃಜನಾತ್ಮಕ ಆರ್ಥಿಕತೆ, ಸಿನಿಮಾ ಉದ್ಯಮ, ಪ್ರಸಾರ ಸಂಸ್ಥೆಗಳು, ಒಟಿಟಿ ವೇದಿಕೆಗಳು, ನಿರ್ಮಾಪಕರು ಹಾಗೂ ವಿತರಕರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.