ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಭಾರತವು ಇಸ್ರೇಲ್ಗೆ ಅಪಾರ ಬೆಂಬಲ ನೀಡುತ್ತಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಇಸ್ರೇಲ್ನ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದು ಭಾರತದ ನಾಗರಿಕತೆಯ ಮೌಲ್ಯಗಳು ಹಾಗೂ ಸಂಪ್ರದಾಯಗಳಿಗೆ ದ್ರೋಹ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, "ನೆತನ್ಯಾಹು ಹೇಳಿರುವುದು ತಪ್ಪು. ಇಸ್ರೇಲ್ಗೆ ಮೋದಿ ಸರ್ಕಾರದ ಬೆಂಬಲ ಇರಬಹುದು. ಆದರೆ, ಕೋಟ್ಯಂತರ ಭಾರತೀಯರು ಗಾಜಾದಲ್ಲಿನ ಮಾನವ ಹತ್ಯೆ, ಪ್ಯಾಲೆಸ್ತೀನಿಯರ ಬಲವಂತದ ಸ್ಥಳಾಂತರ, ಇರಾನ್ ಮೇಲಿನ ವೈಮಾನಿಕ ದಾಳಿ ಹಾಗೂ ದಕ್ಷಿಣ ಲೆಬನಾನ್ನಲ್ಲಿನ ಸೇನಾ ಕಾರ್ಯಾಚರಣೆಯನ್ನು ಖಂಡಿಸುತ್ತಾರೆ. ಇವೆಲ್ಲವೂ ಮಾನವೀಯತೆಯ ಮೇಲಿನ ದಾಳಿಗಳಾಗಿವೆ" ಎಂದು ಹೇಳಿದ್ದಾರೆ.
"ತಮ್ಮನ್ನು ತಾವೇ ವಿಶ್ವಗುರು ಎಂದು ಕರೆದುಕೊಳ್ಳುವ, ಪ್ರಶಸ್ತಿಗಳ ಹಿಂದೆ ಓಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಸ್ರೇಲ್ನ ಈ ಕ್ರಮಗಳ ಬಗ್ಗೆ ಕಲ್ಲಿನಂತೆ ಮೌನ ತಾಳಿರುವುದು ಭಾರತದ ನಾಗರಿಕತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಇದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ" ಎಂದು ಟೀಕಿಸಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಂದ ಪ್ರಶಂಸೆ ಪಡೆಯುವುದು ಹೆಮ್ಮೆಯ ವಿಷಯವಲ್ಲ. ಏಕೆಂದರೆ ನೆತನ್ಯಾಹು ಅಂತರರಾಷ್ಟ್ರೀಯ ಮಟ್ಟದಲ್ಲಿಯೇ ಏಕಾಂಗಿಯಾಗಿದ್ದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿಯೂ ಅಸಮಾಧಾನಕ್ಕೆ ಕಾರಣರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿರುವ ನೆತನ್ಯಾಹು, "ಅಮೆರಿಕ ಮಾತ್ರವಲ್ಲ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಇಸ್ರೇಲ್ಗೆ ಬೆಂಬಲ ನೀಡುತ್ತಿವೆ. 140 ಕೋಟಿ ಜನಸಂಖ್ಯೆಯ ಭಾರತದಿಂದ ನಮಗೆ ಅಪಾರ ಬೆಂಬಲ ದೊರೆಯುತ್ತಿದೆ" ಎಂದು ಹೇಳಿದ್ದರು.
ಈ ಹೇಳಿಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆಯಾಗಿತ್ತು. ಅಮೆರಿಕ-ಇರಾನ್ ಶಾಂತಿ ಮಾತುಕತೆಯ ಕುರಿತು ಮಾತನಾಡಿದ್ದ ವ್ಯಾನ್ಸ್, "ನಾನು ಇಸ್ರೇಲ್ ಸಚಿವ ಸಂಪುಟದಲ್ಲಿದ್ದರೆ, ಉಳಿದಿರುವ ಏಕೈಕ ಪ್ರಬಲ ಮಿತ್ರ ರಾಷ್ಟ್ರವಾದ ಅಮೆರಿಕದ ವಿರುದ್ಧ ಮಾತನಾಡುತ್ತಿರಲಿಲ್ಲ" ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ನೆತನ್ಯಾಹು, "ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತದಿಂದ ನಮಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕ ಹೊರತಾಗಿಯೂ ನಮಗೆ ಅನೇಕ ಮಿತ್ರ ರಾಷ್ಟ್ರಗಳಿವೆ" ಎಂದು ಪ್ರತಿಪಾದಿಸಿದ್ದರು.