ಲಖನೌ: ವಿಶ್ವದಾದ್ಯಂತ ಕಚ್ಚಾ ತೈಲ ಬೆಲೆಗಳು ಕುಸಿದಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಲು ವಿಫಲವಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ನಿರಾಕರಿಸುವ ಮೂಲಕ ಮೋದಿ ಸರ್ಕಾರ ಜನರ ಹಿತಾಸಕ್ತಿಗಿಂತ ಕಂಪನಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿಯ "ಧರ್ಮ ಮತ್ತು ಹಣದ ರಾಜಕೀಯ ಈಗ ಕೊನೆಗೊಂಡಿದೆ" ಎಂದು ವಾಗ್ದಾಳಿ ನಡೆಸಿದರು.
"ವಿಶ್ವಾದ್ಯಂತ ಕಚ್ಚಾ ತೈಲ ಬೆಲೆಗಳು ಕುಸಿದಿದ್ದು, ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ತೀವ್ರ ಕುಸಿದವಾಗಿದೆ. ಇತರ ದೇಶಗಳಲ್ಲಿನ ಸಾರ್ವಜನಿಕರು ಈ ಕಡಿಮೆ ಬೆಲೆಗೆ ತೈಲ ಪಡೆಯುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ, ಬಿಜೆಪಿ ಸರ್ಕಾರ ಬೆಲೆಗಳನ್ನು ಕಡಿಮೆ ಮಾಡುತ್ತಿಲ್ಲ; ಬದಲಾಗಿ, ಅದು ನಿರಂತರವಾಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ. ಬಿಜೆಪಿ ಸರ್ಕಾರವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿಲ್ಲ. ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ" ಎಂದು ಯಾದವ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"...ನಮ್ಮ ದೇಶದಲ್ಲಿ, ಎಲ್ಲದರ ಬೆಲೆ ಏರಿಕೆಯಾಗುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಣದುಬ್ಬರ ಹೆಚ್ಚುತ್ತಿದೆ. ಇದಕ್ಕೆ ಬಿಜೆಪಿಯ ಕಮಿಷನ್ ದಂಧೆ ಕಾರಣ ಮತ್ತು ಸಾಮಾನ್ಯ ಜನರು ದುಬಾರಿ ತೈಲ, ಸಾರಿಗೆ, ಪ್ರಯಾಣ, ಆಹಾರ ಪದಾರ್ಥಗಳು ಮತ್ತು ಇತರ ಎಲ್ಲಾ ಸರಕುಗಳಿಗೆ ಹೆಚ್ಚು ಬೆಲೆ ತೆರುತ್ತಿದ್ದಾರೆ" ಎಂದು ಅವರು ಹೇಳಿದರು.
ಇನ್ನು ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಗರಣದ ಬಗ್ಗೆಯೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಪಕ್ಷದ "ಮುಗ್ಧ ಬೆಂಬಲಿಗರು" ಕೇಸರಿ ಪಕ್ಷ ಧರ್ಮಕ್ಕಾಗಿ ಹೋರಾಡುತ್ತಿದೆ ಎಂದುಕೊಂಡಿದ್ದಾರೆ. ಆದರೆ ಬಿಜೆಪಿ ಹಣಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯ "ಧರ್ಮದ ರಾಜಕೀಯ" ಈಗ ಕೊನೆಗೊಂಡಿದ್ದು, "ಹಣದ ರಾಜಕೀಯ"ದ ಮೇಲೆ ಮಾತ್ರ ಗಮನಹರಿಸುತ್ತಿದೆ ಎಂದು ಎಸ್ಪಿ ಮುಖ್ಯಸ್ಥರು ಆರೋಪಿಸಿದರು ಮತ್ತು ಭ್ರಷ್ಟಾಚಾರ ಮತ್ತು ಹಣದುಬ್ಬರ ಏರುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ಆಡಳಿತ ಪಕ್ಷವನ್ನು ಇನ್ನೂ ಕಟುವಾಗಿ ಟೀಕಿಸಿದ ಅಖಿಲೇಶ್ ಯಾದವ್, ತಮ್ಮ ಪೋಸ್ಟ್ ನಲ್ಲಿ "ಜೋ ಬಿಜೆಪಿ ಕಾ ಸಾಥಿ, ವೋ ರಾಮಘಾಟಿ (ಬಿಜೆಪಿಯನ್ನು ಬೆಂಬಲಿಸುವವರು ಭಗವಾನ್ ರಾಮನಿಗೆ ದ್ರೋಹ ಮಾಡುತ್ತಿದ್ದಾರೆ)" ಎಂಬ ಘೋಷಣೆಯೊಂದಿಗೆ ಕೊನೆಗೊಳಿಸಿದ್ದಾರೆ.