ತಿರುವನಂತಪುರಂ: ಕೇರಳದ ಕಣ್ಣೂರಿನ ಆಸ್ಪತ್ರೆಯೊಂದರಲ್ಲಿ ಅರಿವಳಿಕೆ (ಅನಸ್ತೇಶಿಯಾ) ನೀಡಿದ ನಂತರ ಪ್ರಜ್ಞೆ ತಪ್ಪಿದ್ದ 18 ತಿಂಗಳ ಮಗುವೊಂದು ಮೃತಪಟ್ಟಿದೆ. ಕುಟುಂಬವು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಣ್ಣೂರಿನ ಎರಮಾಮ್-ಕುಟ್ಟೂರ್ ನಿವಾಸಿಗಳಾದ ಟಿ ಸೂರಜ್ ಮತ್ತು ವಿಜಿಷಾ ಅವರ ಒ್ಬಬನೇ ಪುತ್ರ ದೇವಂಶ್ ಶೌರ್ಯ, ಜುಲೈ 5 ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಿದ್ದು ತುಟಿಗೆ ಗಾಯ ಮಾಡಿಕೊಂಡಿದ್ದನು. ಆತನನ್ನು ಮೊದಲು ಮಥಮಂಗಲಂನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.
ನಂತರ ಅವರನ್ನು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅರಿವಳಿಕೆ ನೀಡಿ ಗಾಯಕ್ಕೆ ಹೊಲಿಗೆ ಹಾಕಲಾಯಿತು. ಆ ಬಳಿಕ ಮಗು ಪ್ರಜ್ಞೆ ತಪ್ಪಿತು. ನಂತರ ಶೌರ್ಯ ಅವರನ್ನು ಕಣ್ಣೂರಿನ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಮಗು ಮೃತಪಟ್ಟಿತು ಎಂದು ಹೇಳಲಾಗಿದೆ.
ಅಂಜಲಿ ಪೋಡುವಾಲ್ ಎಂಬ ವೈದ್ಯರ ವಿರುದ್ಧ ಕುಟುಂಬವು ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಹೊರಿಸಿತು; ಇದರ ಪರಿಣಾಮವಾಗಿ, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಈ ಸೆಕ್ಷನ್ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದ್ದು, ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುತ್ತದೆ.
ಆರೋಪ ನಿರಾಕರಿಸಿದ ಆಸ್ಪತ್ರೆ
ಕೋಯಿಕ್ಕೋಡ್, ಕಣ್ಣೂರು, ತೊಡುಪುಳ, ಪಯ್ಯನೂರು ಮತ್ತು ವಡಕರದಲ್ಲಿ ಶಾಖೆಗಳನ್ನು ಹೊಂದಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆಯು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿದೆ.
ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತ ಹೃದಯ ಸ್ತಂಭನ ಸಂಭವಿಸಿದೆ ಮತ್ತು ತಕ್ಷಣವೇ ವೆಂಟಿಲೇಟರ್ ಬೆಂಬಲದಲ್ಲಿ ಸುಧಾರಿತ ತೀವ್ರ ನಿಗಾಕ್ಕಾಗಿ ಕಣ್ಣೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಸೂಕ್ತ ಡೋಸೇಜ್ ಮತ್ತು ವೈದ್ಯಕೀಯ ಆರೈಕೆಯ ಹೊರತಾಗಿಯೂ ಅರಿವಳಿಕೆ ನೀಡಿದ ನಂತರ ತೊಡಕುಗಳು ಉಂಟಾಗಬಹುದು ಎಂದು ಆಸ್ಪತ್ರೆ ಸಮರ್ಥಿಸಿಕೊಂಡಿದೆ ಮತ್ತು ಎಲ್ಲ ಅಂಗೀಕೃತ ಚಿಕಿತ್ಸಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ. ಮಗುವಿನ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅದು ಹೇಳಿದೆ.