ಡೆಹ್ರಾಡೂನ್: ಮಸ್ಸೂರಿ-ಧನೌಲ್ಟಿ ರಸ್ತೆಯಲ್ಲಿರುವ ಹೋಂಸ್ಟೇಯಲ್ಲಿ 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಪರುಪುಡಿ ರಾಧಾ ಗಾಯತ್ರಿ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಅವರ ಪತಿ ಸೋಮಯಾಶ್ರೀ ಚರಣ್ ಅವರನ್ನು ಶನಿವಾರ ಬಂಧಿಸಿದ್ದಾರೆ.
ಪತ್ನಿಯ ಸಾವಿನ ನಂತರ ಮಸ್ಸೂರಿಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಸೋಮಯಾಶ್ರೀ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ನಂತರ ಆರೋಪಿಯನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ.
ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳು ಮತ್ತು ಇತರ ಸಾಕ್ಷ್ಯಗಳು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜೂನ್ 15, 2026 ರಂದು ಮಸ್ಸೂರಿಯ ಬಟಾಘಾಟ್ ಪೊಲೀಸ್ ಔಟ್ಪೋಸ್ಟ್ ಬಳಿಯ ತಿಪ್ರಿಧಾರ್ನಲ್ಲಿರುವ ಕಿಯಾನಾ ಹೋಂಸ್ಟೇಯ ಕೋಣೆಯೊಳಗೆ ಗಾಯತ್ರಿ ಶವವಾಗಿ ಪತ್ತೆಯಾಗಿದ್ದರು. ಅವರು ರಜೆಗಾಗಿ ತಮ್ಮ ಪತಿಯೊಂದಿಗೆ ಬೆಟ್ಟದ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಈ ಸಂಬಂಧ ಮಹಿಳೆಯ ಕುಟುಂಬದ ದೂರಿನ ಮೇರೆಗೆ ಮಸ್ಸೂರಿ ಪೊಲೀಸ್ ಠಾಣೆಯಲ್ಲಿ ಚರಣ್ ವಿರುದ್ಧ ಪ್ರಕರಣ ದಾಖಲಾಗಿದೆ.
"ಘಟನಾ ಸ್ಥಳದಿಂದ ಮದ್ಯದ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗಿನ ತನಿಖೆಯಲ್ಲಿ ಬಹಿರಂಗವಾದ ಸಂಗತಿಗಳು ಮತ್ತು ಪುರಾವೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ವ ದೆಹಲಿಯ ಮಧು ವಿಹಾರ್ ನಿವಾಸಿಯಾದ ಗಾಯತ್ರಿ ಮತ್ತು ಚರಣ್, ನವೆಂಬರ್ 2025 ರಲ್ಲಿ ವಿವಾಹವಾಗಿದ್ದರು.