ವಿಯೆಟ್ನಾಂನಲ್ಲಿ ನಡೆದ ದೋಣಿ ಅಪಘಾತದಲ್ಲಿ ಭಾರತೀಯ ನಾಗರಿಕರು ಸಾವನ್ನಪ್ಪಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಖಾಸಗಿ ಮೊಬೈಲ್ ಫೋನ್ ಕಂಪನಿಯ ಉದ್ಯೋಗಿಗಳು ವಾರ್ಷಿಕ ಸಭೆಯಲ್ಲಿ ಭಾಗವಹಿಸಲೆಂದು ವಿಯೆಂಟ್ನಾಗೆ ತೆರಳಿದ್ದು ದೋಣಿ ದುರಂತದಲ್ಲಿ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದರು.
ವಿಯೆಟ್ನಾಂನ ಫು ಕ್ವಾಕ್ ಬಳಿ ಭಾರತೀಯ ಪ್ರಜೆಗಳು ಭಾಗಿಯಾಗಿರುವ ದೋಣಿ ಅಪಘಾತದ ದುರಂತ ಸುದ್ದಿ ತಿಳಿದು ತುಂಬಾ ದುಃಖವಾಯಿತು ಎಂದು ಹೇಳಿದ್ದಾರೆ. ಭಾರತೀಯ ರಾಯಭಾರ ಕಚೇರಿ ಮತ್ತು ದೂತಾವಾಸವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಅಧಿಕಾರಿಗಳು ವಿಯೆಟ್ನಾಂ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಗಾಯಗೊಂಡ ಬದುಕುಳಿದವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುವುದಾಗಿ ಹೇಳಿದರು. ಅಪಘಾತದ ಸಮಯದಲ್ಲಿ, 32 ಭಾರತೀಯ ಪ್ರವಾಸಿಗರು ಮತ್ತು ನಾಲ್ವರು ಸಿಬ್ಬಂದಿ ಸ್ಪೀಡ್ಬೋಟ್ನಲ್ಲಿದ್ದರು. ಫು ಕ್ವಾಕ್ ಕರಾವಳಿಯ ಆನ್ ಥೋಯ್ ದ್ವೀಪಸಮೂಹದಲ್ಲಿರುವ ಹಾನ್ ಮೆ ರುಟ್ ನ್ಗೋಯ್ ದ್ವೀಪದಿಂದ ಸುಮಾರು 400 ಮೀಟರ್ ದೂರದಲ್ಲಿ ಈ ದೋಣಿ ಮಗುಚಿ ಬಿದ್ದಿತ್ತು. ಮೂಲಗಳ ಪ್ರಕಾರ, ಮೃತರಲ್ಲಿ ಆಂಧ್ರಪ್ರದೇಶ ಐವರ ಪೈಕಿ ಇಬ್ಬರು ಮೃತಪಟ್ಟಿದ್ದು ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದಂತೆ ತಮಿಳುನಾಡಿನವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ.
ಏತನ್ಮಧ್ಯೆ, ವಿಯೆಟ್ನಾಂನ ಫು ಕ್ವಾಕ್ ದ್ವೀಪದ ಬಳಿ ದೋಣಿ ಅಪಘಾತದಲ್ಲಿ ಕಾಣೆಯಾದ ಭಾರತೀಯ ಪ್ರವಾಸಿಗರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುವಂತೆ ಕಾಂಗ್ರೆಸ್ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದೆ. ಕಾಂಗ್ರೆಸ್ ನಾಯಕ ಪವನ್ ಖೇರಾ, ಎಕ್ಸ್ನಲ್ಲಿ ಪೋಸ್ಟ್ನಲ್ಲಿ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೆಲವು ಗಂಟೆಗಳ ಹಿಂದೆ ಫು ಕ್ವಾಕ್ ದ್ವೀಪದ ಬಳಿ ಅಪಘಾತಕ್ಕೀಡಾದ ದೋಣಿಯಲ್ಲಿದ್ದ 32 ಭಾರತೀಯ ಪ್ರವಾಸಿಗರ ಹೆಸರುಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಇನ್ನೂ ಪತ್ತೆಯಾಗದ ಭಾರತೀಯ ಪ್ರವಾಸಿಗರ ಕುಟುಂಬಗಳಿಗೆ ವಿದೇಶಾಂಗ ಸಚಿವಾಲಯವು ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡಬೇಕು ಎಂದು ಅವರು ಹೇಳಿದರು. ನಾವು ಕಾಣೆಯಾದ ಭಾರತೀಯ ಪ್ರವಾಸಿಗರ ಕುಟುಂಬಗಳೊಂದಿಗೆ ನಿಲ್ಲುತ್ತೇವೆ ಮತ್ತು ಅವರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
ಕಳೆದ ವರ್ಷ ಜುಲೈನಲ್ಲಿ ಉತ್ತರ ವಿಯೆಟ್ನಾಂನ ಪ್ರಸಿದ್ಧ ಹ್ಯಾಲೊಂಗ್ ಸಮುದ್ರದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ಹಠಾಟ್ ಬಿರುಗಾಳಿಯಿಂದ ಪ್ರವಾಸಿ ದೋಣಿ ಮಗುಚಿ 39 ಜನರು ಸಾವನ್ನಪ್ಪಿದ್ದರು.