ವಿಶಾಖಪಟ್ಟಣಂ: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಆಂಧ್ರಪ್ರದೇಶದ ಕರಾವಳಿ ನಗರವಾದ ವಿಶಾಖಪಟ್ಟಣಂನ ಹಲವು ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಭಾನುವಾರ ತಿಳಿದುಬಂದಿದೆ.
ರಾಷ್ಟ್ರೀಯ ಭೂಕಂಪನ ಕೇಂದ್ರ (NCS) ನೀಡಿರುವ ಮಾಹಿತಿಯ ಪ್ರಕಾರ, ಇಂದು ಮುಂಜಾನೆ 5:05:46 ಕ್ಕೆ ಈ ಭೂಕಂಪ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 4.5 ರಷ್ಟು ದಾಖಲಾಗಿದ್ದು, ಭೂಮಿಯ ಮೇಲ್ಮೈನಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದರ ಕೇಂದ್ರಬಿಂದು ಬಂಗಾಳ ಕೊಲ್ಲಿಯಲ್ಲಿ ಕಾಕಿನಾಡ ಕರಾವಳಿಯಿಂದ ಸುಮಾರು 225 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ.
ಭೂಕಂಪದ ಕೇಂದ್ರಬಿಂದುವಿನ ಸ್ಥಾನ 16.805° ಉತ್ತರ ಅಕ್ಷಾಂಶ ಹಾಗೂ 84.381° ಪೂರ್ವ ರೇಖಾಂಶದಲ್ಲಿ ಇತ್ತು ಎಂದು INCOIS ತಿಳಿಸಿದೆ.
ಭೂಕಂಪದ ಪರಿಣಾಮವಾಗಿ ವಿಶಾಖಪಟ್ಟಣಂ ನಗರದ ಹಲವು ಭಾಗಗಳಲ್ಲಿ ಸೌಮ್ಯ ಕಂಪನ ಅನುಭವವಾಗಿದ್ದರೂ, ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿಗೆ ಹಾನಿ ಅಥವಾ ಇತರ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಿಶಾಖಪಟ್ಟಣಂನ ಎಂವಿಪಿ ಕಾಲೋನಿ, ಪೆದವಾಲ್ಟೇರ್, ಗಾಜುಯಾಕ, ಸಾಗರ್ ನಗರ, ಯೆಂದಡ ಮತ್ತು ಅರಿಲೋವಾ ಸೇರಿದಂತೆ ಹತ್ತಿರದ ಹಲವು ಕರಾವಳಿ ಪ್ರದೇಶಗಳಲ್ಲಿ ಸುಮಾರು 2 ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ.
ಇದರಿಂದ ಮುಂಜಾನೆ ಗಾಢ ನಿದ್ರೆಯಲ್ಲಿದ್ದ ಜನರಿಗೆ ಇದ್ದಕ್ಕಿದ್ದಂತೆ ಮಂಚ, ಪಾತ್ರೆಗಳು ಮತ್ತು ಕಿಟಕಿಗಳು ನಡುಗಿದ ಅನುಭವವಾಗಿದೆ. ಆತಂಕಗೊಂಡ ಜನರು ತಕ್ಷಣ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.