ಜಮ್ಮು-ಕಾಶ್ಮೀರ: ತಮ್ಮ ಸರ್ಕಾರವನ್ನು ಉರುಳಿಸಲು, ನ್ಯಾಷನಲ್ ಕಾನ್ಫರೆನ್ಸ್ ಶಾಸಕರಿಗೆ ಬಿಜೆಪಿ ಸಚಿವ ಸ್ಥಾನ ಮತ್ತು ಹಣದ ಆಮಿಷವೊಡ್ಡುತ್ತಿದೆ ಎಂಬ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರಿಗೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ಸೋಮವಾರ ಕಾನೂನು ನೋಟಿಸ್ ಜಾರಿ ಮಾಡಿದೆ.
ಒಮರ್ ಅಬ್ದುಲ್ಲಾ ಅವರ ಆರೋಪಗಳನ್ನು "ಸುಳ್ಳು, ಆಧಾರರಹಿತ ಮತ್ತು ಮಾನನಷ್ಟಕರ" ಎಂದು ಕರೆದಿದ್ದು, ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು, ಏಳು ದಿನಗಳಲ್ಲಿ ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಇಲ್ಲದಿದ್ದರೆ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದೆ.
ಕಳೆದ ವಾರ ಹಜರತ್ಬಾಲ್ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ನ್ಯಾಷನಲ್ ಕಾನ್ಫರೆನ್ಸ್ ಒಡಕು ಸೃಷ್ಟಿಸುವ ಮೂಲಕ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಕೇಸರಿ ಪಾಳಯಕ್ಕೆ ಸೇರಲು ತನಗೆ 20-30 ಕೋಟಿ ರೂ. ಮತ್ತು ಸಚಿವ ಸ್ಥಾನ ನೀಡಲಾಗಿತ್ತು ಎಂದು ಜಮ್ಮುವಿನ ಎನ್ಸಿ ಶಾಸಕರೊಬ್ಬರು ಹೇಳಿರುವುದಾಗಿ ತಿಳಿಸಿದ್ದರು.
ಈ ಸಂಬಂಧ ಬಿಜೆಪಿ ಜಮ್ಮು-ಕಾಶ್ಮೀರ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಸತ್ ಪಾಲ್ ಶರ್ಮಾ ಅವರ ಸೂಚನೆಯ ಮೇರೆಗೆ ವಕೀಲ ಪರಿಮೋಕ್ಷ ಸೇಠ್ ಮೂಲಕ ನೋಟಿಸ್ ನೀಡಲಾಗಿದೆ. ಮುಖ್ಯಮಂತ್ರಿಯವರ ಹೇಳಿಕೆಗಳು ಬಿಜೆಪಿ ಮತ್ತು ಅದರ ವರ್ಚಸ್ಸು ಮತ್ತು ಸಾರ್ವಜನಿಕ ಸ್ಥಾನಮಾನಕ್ಕೆ ಗಂಭೀರ ಹಾನಿಯನ್ನುಂಟುಮಾಡಿದೆ ಎಂದು ಹೇಳಲಾಗಿದೆ. ಪಕ್ಷವು ಮುಖ್ಯಮಂತ್ರಿಗೆ ನೋಟಿಸ್ ಕಳುಹಿಸಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಮೂರು ಪುಟಗಳ ನೋಟಿಸ್ ನಲ್ಲಿ, ಬಿಜೆಪಿ ಕಾರ್ಯಕರ್ತರು 20-30 ಕೋಟಿ ರೂ.ಗಳ ಆಫರ್, ಸಚಿವ ಸ್ಥಾನಗಳು ಮತ್ತು ರಾಜ್ಯ ಸ್ಥಾನದ ಮರುಸ್ಥಾಪನೆಯೊಂದಿಗೆ ಜಮ್ಮು ಪ್ರದೇಶದ ಕೆಲವು ನ್ಯಾಷನಲ್ ಕಾನ್ಫರೆನ್ಸ್ ಶಾಸಕರನ್ನು ಸಂಪರ್ಕಿಸಿ ಬಿಜೆಪಿಗೆ ನಿಷ್ಠೆ ಬದಲಾಯಿಸಲು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅಬ್ದುಲ್ಲಾ ಆರೋಪಿಸಿದ್ದಾರೆ.
ಆರೋಪಗಳನ್ನು ತಿರಸ್ಕರಿಸಿದ ಬಿಜೆಪಿ, ಅವುಗಳನ್ನು "ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಯಾವುದೇ ವಾಸ್ತವಿಕ ಆಧಾರವಿಲ್ಲದೆ ಹೇಳಿಕೆ ಎಂದು ಹೇಳಿದೆ. ಪಕ್ಷದ ವರ್ಚಸ್ಸನ್ನು ಹಾಳುಮಾಡಲು ಉದ್ದೇಶಪೂರ್ವಕವಾಗಿ ಆರೋಪಗಳನ್ನು ಮಾಡಲಾಗಿದೆ. ಇದರಿಂದಾಗಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.