ನವದೆಹಲಿ: ಹರಿಯಾಣದ ಜಿಂದ್ನಲ್ಲಿ ಶುಕ್ರವಾರ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಖಲಿಸ್ತಾನ್ ಪರ ಸಂಘಟನೆ ಇಮೇಲ್ ಮೂಲಕ ಬೆದರಿಕೆ ಹಾಕಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ.
ಪ್ರಧಾನಿ ಮೋದಿ ಅವರು ಜುಲೈ 17 ರಂದು ಪಂಜಾಬ್ ಮತ್ತು ಹರಿಯಾಣಕ್ಕೆ ಭೇಟಿ ನೀಡಿದಾಗ, ಚಂಡೀಗಢ ಹಾಗೂ ಜಲಂಧರ್ನ ಶಾಲೆಗಳು, ರೈಲು ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗೂ ಬೆದರಿಕೆ ಹಾಕಲಾಗಿದೆ.
"ಖಲಿಸ್ತಾನ್ ರಾಷ್ಟ್ರೀಯ ಸೇನೆ" ಎಂದು ಗುರುತಿಸಿಕೊಳ್ಳುವ ಗುಂಪಿನ ಪರವಾಗಿ ಈ ಇಮೇಲ್ ಕಳುಹಿಸಲಾಗಿದೆ ಎಂದು ಹೇಳಲಾಗಿದ್ದು, ಇದು ಇತ್ತೀಚಿನ ತಿಂಗಳುಗಳಲ್ಲಿ ಆರ್ಎಸ್ಎಸ್ನ ನಾಗ್ಪುರ ಪ್ರಧಾನ ಕಚೇರಿ ಸೇರಿದಂತೆ ಇದೇ ರೀತಿಯ ಹಲವು ಬೆದರಿಕೆಗಳನ್ನು ಹಾಕಿದೆ.
ಖಲಿಸ್ತಾನಿ ಉಗ್ರರು, ರೈತರು ಮತ್ತು ಹತ್ಯೆಯಾದ ಮಾನವ ಹಕ್ಕುಗಳ ಕಾರ್ಯಕರ್ತ ಜಸ್ವಂತ್ ಸಿಂಗ್ ಖಲ್ರಾ ಅವರನ್ನೂ ಉಲ್ಲೇಖಿಸಿದ್ದು, ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ದೋಸಾಂಜ್ ಅವರು 'ಸಟ್ಲುಜ್' ಚಿತ್ರದಲ್ಲಿ ಖಲ್ರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಜುಲೈ 3 ರಂದು ಬಿಡುಗಡೆಯಾದ ಎರಡು ದಿನಗಳ ನಂತರ OTT ಪ್ಲಾಟ್ಫಾರ್ಮ್ ZEE5 ನಿಂದ ತೆಗೆದು ಹಾಕಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಪ್ರಕಾರ, ಇಮೇಲ್ ಅನ್ನು "kengakira@gmail.com" ಐಡಿಯಿಂದ ಕಳುಹಿಸಲಾಗಿದೆ. ಶಾಲೆಗಳಲ್ಲಿ ಮಧ್ಯಾಹ್ನ 1:11 ಕ್ಕೆ ಮತ್ತು ಮೊಹಾಲಿ ಮೇಯರ್ ಕಚೇರಿಯಲ್ಲಿ ಜುಲೈ 17 ರಂದು ಮಧ್ಯಾಹ್ನ 3:11 ಕ್ಕೆ ಸ್ಫೋಟ ಸಂಭವಿಸಲಿದೆ ಎಂದು ಅದು ಹೇಳಿಕೊಂಡಿದೆ.
ಪ್ರಧಾನಿ ಮೋದಿ ಜುಲೈ 17 ರಂದು ಚಂಡೀಗಢ, ಪಂಜಾಬ್ ಮತ್ತು ಹರಿಯಾಣಕ್ಕೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಘೋಷಣೆ ಮಾಡಲಿದ್ದಾರೆ. ಅವರು ಹರಿಯಾಣದ ಜಿಂದ್ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆದರಿಕೆಯ ನಂತರ, ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ತನಿಖೆಯನ್ನು ಪ್ರಾರಂಭಿಸಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿವೆ.
ಪೊಲೀಸ್ ಅಧಿಕಾರಿಗಳು ಇಮೇಲ್ನ ಸತ್ಯಾಸತ್ಯತೆ ಮತ್ತು ಬೆದರಿಕೆಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.