ಪ್ರಾತಿನಿಧಿಕ ಚಿತ್ರ 
ದೇಶ

ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ; ಸಾಮೂಹಿಕ ನಿರ್ಗಮನಕ್ಕೆ ಕಡಿವಾಣ ಹಾಕಲು ಬಾಹ್ಯಾಕಾಶ ಇಲಾಖೆ ಮುಂದು!

ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಸಿಬ್ಬಂದಿ ನಿರ್ಗಮನದ ವಿಷಯವನ್ನು ಒಪ್ಪಿಕೊಂಡರಾದರೂ, ಇದರಿಂದ ಸದ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತಾದ ಆತಂಕ ನಿವಾರಿಸಲು ಪ್ರಯತ್ನಿಸಿದರು.

ಭಾರತದಾದ್ಯಂತ ಇರುವ ಇಸ್ರೋದ (ISRO) ವಿವಿಧ ಕೇಂದ್ರಗಳ ಸುಮಾರು 100 ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ ಅಥವಾ ಸಂಸ್ಥೆಯನ್ನು ತೊರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, 'ಗಗನಯಾನ'ದಂತಹ ಮಹತ್ವದ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸುವ ಆದೇಶವನ್ನು ಬಾಹ್ಯಾಕಾಶ ಇಲಾಖೆ ಹೊರಡಿಸಿದೆ.

ಬಾಹ್ಯಾಕಾಶ ಇಲಾಖೆ ಜಂಟಿ ಕಾರ್ಯದರ್ಶಿ (ಸಿಬ್ಬಂದಿ) ಎಸ್.ಆರ್. ರಾಜಶೇಖರ್ ಅವರ ಸಹಿಯೊಂದಿಗೆ ಜುಲೈ 14ರಂದು ಹೊರಡಿಸಲಾದ ಜ್ಞಾಪನ ಪತ್ರದಲ್ಲಿ, 'ಇತ್ತೀಚಿನ ದಿನಗಳಲ್ಲಿ, ಪ್ರತಿಷ್ಠಿತ 'ಗಗನಯಾನ' ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ, ಇಸ್ರೋದ 'ಗ್ರೂಪ್ ಎ' ವೈಜ್ಞಾನಿಕ/ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬರುತ್ತಿರುವುದು ಕಂಡುಬಂದಿದೆ; ಇದು ರಾಷ್ಟ್ರೀಯ ಮಹತ್ವದ ಯೋಜನೆಗಳ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ' ಎಂದು ತಿಳಿಸಲಾಗಿದೆ.

ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರಿಗೆ ಕಳುಹಿಸಲಾದ ಜ್ಞಾಪನ ಪತ್ರವು, ಈ ವಿಷಯದತ್ತ ಗಮನಹರಿಸುವಂತೆ ಹಾಗೂ 'ಗಗನಯಾನ' ಅಥವಾ ಇತರ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೂ, ಅವುಗಳಲ್ಲಿ ಕೆಲಸ ಮಾಡುತ್ತಿರುವ 'ಗ್ರೂಪ್ ಎ'ನ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಅಥವಾ ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಮನವಿಗಳನ್ನು ಸ್ವೀಕರಿಸದಂತೆ ಸೂಚಿಸಿದೆ.

'ಗಗನಯಾನ ಹಾಗೂ ಇತರ ಪ್ರಮುಖ ಕಾರ್ಯಾಚರಣೆಗಳು ಅಥವಾ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆ ಕೋರಿಕೆಗಳನ್ನು ಸದ್ಯ ಸ್ವೀಕರಿಸದಿರಲು ನಿರ್ಧರಿಸಲಾಗಿದೆ' ಎಂದು ತಿಳಿಸಲಾಗಿದೆ.

ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ (ವಿಜ್ಞಾನಿಗಳು/ಎಂಜಿನಿಯರ್‌ಗಳು-ಎಸ್‌ಜಿ ಶ್ರೇಣಿ ಹಾಗೂ ಅದಕ್ಕಿಂತ ಕೆಳಗಿನ ಶ್ರೇಣಿಯವರೂ ಸೇರಿದಂತೆ) ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಕೋರಿಕೆಗಳು ಬಂದಲ್ಲಿ, ಅಂತಿಮ ನಿರ್ಧಾರಕ್ಕಾಗಿ ಆಯಾ ಕೇಂದ್ರಗಳು ಅಥವಾ ಘಟಕಗಳ ಮುಖ್ಯಸ್ಥರ ಸ್ಪಷ್ಟ ಶಿಫಾರಸುಗಳೊಂದಿಗೆ ಅವುಗಳನ್ನು ಬಾಹ್ಯಾಕಾಶ ಇಲಾಖೆಗೆ (DoS) ಕಳುಹಿಸಬಹುದು ಎಂದು ತಿಳಿಸಿದೆ.

ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಸಿಬ್ಬಂದಿ ನಿರ್ಗಮನದ ವಿಷಯವನ್ನು ಒಪ್ಪಿಕೊಂಡರಾದರೂ, ಇದರಿಂದ ಸದ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತಾದ ಆತಂಕ ನಿವಾರಿಸಲು ಪ್ರಯತ್ನಿಸಿದರು.

'ಹೌದು, ಅನೇಕರು ಸಂಸ್ಥೆಯನ್ನು ತೊರೆಯುತ್ತಿದ್ದಾರೆ; ಇದು ಪ್ರತಿಯೊಂದು ಸಂಸ್ಥೆಯಲ್ಲೂ ನಡೆಯುವ ಸಹಜ ಪ್ರಕ್ರಿಯೆ. ನಮ್ಮ ಈ ಕ್ರಮವು ಕೇವಲ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಬದಲಿಗೆ ಪ್ರಮುಖ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೂ ಆಗಿದೆ. ಯಾರಾದರೂ ಹೋದರೆ, ಇನ್ನೊಬ್ಬರು ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಾವು ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ' ಎಂದು ಅವರು ಹೇಳಿದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರ ನಿಯೋಜನೆ ಬೇಡ- DGMA ನಿರ್ದೇಶನ!

9ನೇ ತರಗತಿಯಿಂದಲ್ಲ, ನಿಮ್ಮ ತ್ರಿಭಾಷಾ ಸೂತ್ರವನ್ನು 5-6 ನೇ ಕ್ಲಾಸ್ ನಿಂದ ಜಾರಿಗೆ ತನ್ನಿ: CBSE ನಿಯಮದ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿ

ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಪರಿಷತ್ ಸದಸ್ಯತ್ವ ರದ್ದು; ಗಾಯತ್ರಿ ಶಾಂತೇಗೌಡ ಮೇಲುಗೈ!

'ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯ'; Sonam Wangchuk ಆರೋಗ್ಯದ ಮೇಲೆ ಪ್ರತಿದಿನ ನಿಗಾ ವಹಿಸಿ: Delhi High court ಆದೇಶ

Hormuz ಉದ್ವಿಗ್ನತೆ ಮತ್ತಷ್ಟು ತೀವ್ರ: Iran ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ; ಟೆಹ್ರಾನ್ ಪ್ರತೀಕಾರ, ಬಹ್ರೇನ್-ಕುವೈತ್ ಗುರಿಯಾಗಿಸಿ ಕ್ಷಿಪಣಿಗಳ ಸುರಿ ಮಳೆ..!