ಚಿತ್ತೂರು: ಇತ್ತೀಚಿಗೆ ವೈವಾಹಿಕ ಸಂಬಂಧಗಳು ಭೀಕರ ಕೊಲೆಯಲ್ಲಿ ಅಂತ್ಯವಾಗುತ್ತಿದ್ದು, ಮದುವೆಯ ಕಲ್ಪನೆಯೇ ಭಯಾನಕವೆನಿಸುವ ಆಘಾತಕಾರಿ ಘಟನೆಗಳು ಸಂಭವಿಸುತ್ತಿವೆ. ಇದೀಗ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡುಪಲ್ಲೆ ಮಂಡಲದಲ್ಲಿ ಯುವತಿಯೊಬ್ಬಳು, ತನ್ನ ಗಂಡನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಪ್ರಿಯಕರನ ಸಹಾಯದಿಂದ ಕೊಲೆ ಮಾಡಿದ್ದಾರೆ.
ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಅಮವಾಸ್ಯೆಯ ಸಂದರ್ಭದಲ್ಲಿ ದೇವರ ಆಶೀರ್ವಾದ ಪಡೆಯುವ ನೆಪದಲ್ಲಿ ಪತಿಯನ್ನು ಕರೆದುಕೊಂಡು ಹೋಗಿ ಪ್ರಿಯಕರನ ನೆರವಿನಿಂದ ಪತ್ನಿಯೇ ಕೊಂದು ಹಾಕಿದ್ದಾಳೆ.
ಡಿಜಿಟಲ್ ಪುರಾವೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ವಿಶ್ಲೇಷಣೆಯು ಕೆಲವೇ ಗಂಟೆಗಳಲ್ಲಿ ಪತಿ ಹತ್ಯೆಯ ಪಿತೂರಿಯನ್ನು ಬಯಲು ಮಾಡಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ವಿವರಗಳನ್ನು ನೀಡಿದ ಕುಪ್ಪಂ ಡಿಎಸ್ ಪಿ ಪಾರ್ಥಸಾರಥಿ, ಕೊಲೆಯಾಗಿರುವ ವ್ಯಕ್ತಿಯನ್ನು ದೇವಾಸನಪಲ್ಲೆಯ ರಮೇಶ್(ತಮಿಳುನಾಡಿನ ಸುಳಗಿರಿ ಬಳಿ) ಎಂದು ಗುರುತಿಸಲಾಗಿದ್ದು, ಅವರು ಹೊಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಪ್ಪಂ ಕ್ಷೇತ್ರದ ಬೋಯನಪಲ್ಲೆ ಮೂಲದ ಹಸಿನಿ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಮೌಲಿಕಾಶ್ರೀ ಎಂಬ ಒಂದು ವರ್ಷದ ಮಗಳು ಸಹ ಇದ್ದಾಳೆ. ಆದರೆ ತನ್ನ ಹಸಿನಿ, ತನ್ನ ವಿವಾಹೇತರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಹಸಿನಿ ತನ್ನ ಪತಿ ಮತ್ತು ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಗುಡುಪಲ್ಲೆ ಮಂಡಲದ ಮಲ್ಲಪ್ಪ ಕೊಂಡ ದೇವಸ್ಥಾನಕ್ಕೆ ತೆರಳಿದ್ದಳು. ಈ ವೇಳೆ ಆಕೆ ತನ್ನ ಮೊಬೈಲ್ ಫೋನ್ ಘಾಟ್ ರಸ್ತೆಯ ಮೂರನೇ ತಿರುವಿನಲ್ಲಿ ಬೀಳಿಸಿಕೊಂಡಿದ್ದಳು. ಫೋನ್ ಬಿದ್ದಿದೆ ಎಂದು ತನ್ನ ಪತಿಗೆ ಹೇಳಿ ಅದನ್ನು ಮರಳಿ ತೆಗೆದುಕೊಂಡು ಬರುವುದಕ್ಕಾಗಿ ಬೈಕ್ ನಿಲ್ಲಿಸುವಂತೆ ಮಾಡಿದ್ದಳು. ಈ ನಡುವೆ ಪ್ಲಾನ್ ಪ್ರಕಾರ, ಆಕೆಯ ಪ್ರಿಯಕರ ಇತರ ಇಬ್ಬರು ಯುವಕರೊಂದಿಗೆ ಅಲ್ಲಿಗೆ ಆಗಮಿಸಿ ಕಾಯುತ್ತಿದ್ದರು. ಅತ್ತ ತನ್ನ ಪ್ರೇಯಸಿ ಗಂಡ ಬೈಕ್ ನಿಲ್ಲಿಸಿದ ತಕ್ಷಣ ಆತನನ್ನು ಪೊದೆಗಳಿಗೆ ಎಳೆದುಕೊಂಡು ಹೋಗಿ ಚಾಕುಗಳಿಂದ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯಗಳನ್ನು ನಾಶ ಮಾಡುವ ದೃಷ್ಟಿಯಿಂದ ತಮ್ಮ ಬಟ್ಟೆ ಮತ್ತು ಕೈಗವಸುಗಳನ್ನು ಬೆಂಕಿ ಇಟ್ಟು ಸುಟ್ಟುಹಾಕಿದ್ದರು ಎಂದು ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ರಮೇಶ್ ಅವರ ಪತ್ನಿ ಮತ್ತು ಇತರ ಇಬ್ಬರು ಪುರುಷರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕವಾಗಿ ತೀರ್ಮಾನಕ್ಕೆ ಬಂದಿದ್ದಾರೆ. ಇದೇ ಆಧಾರದ ಮೇಲೆ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.