ಅಹಮದಾಬಾದ್ (ಗುಜರಾತ್): ಗುಜರಾತ್ನ (Gujarat) ಅಹಮದಾಬಾದ್ನ (Ahmedabad) ಟ್ಯಾಲೆಂಟ್ ಫೈರ್ವರ್ಕ್ಸ್ ಎಂಬ ಪಟಾಕಿ ಕಾರ್ಖಾನೆಯಲ್ಲಿ (Fireworks Factory) ಶನಿವಾರ ಭೀಕರ ಸ್ಫೋಟ (Blast) ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 8 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಘಟನೆ?
ಗುಜರಾತ್ನ ಅಹಮದಾಬಾದ್ನ ವಸ್ತ್ರಾಲ್ ಪ್ರದೇಶದಲ್ಲಿರುವ 'ಟ್ಯಾಲೆಂಟ್ ಫೈರ್ವರ್ಕ್ಸ್' ಎಂಬ ಪಟಾಕಿ ಕಾರ್ಖಾನೆಯ ಪರವಾನಗಿಯನ್ನು ಮೊದಲೇ ರದ್ದುಗೊಳಿಸಲಾಗಿದ್ದರೂ, ಜಮೀನೊಂದರಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕೆಯನ್ನು ಮುಂದುವರಿಸಲಾಗಿತ್ತು. ಇದೇ ವೇಳೆ ಈ ದುರಂತ ಸಂಭವಿಸಿದೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಇದ್ದ ರಾಪಿಡ್ ಆಕ್ಷನ್ ಫೋರ್ಸ್ (RAF) ಕ್ಯಾಂಪ್ನ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಇನ್ನು ಗಾಯಾಳುಗಳನ್ನು ತಕ್ಷಣವೇ ಎಲ್.ಜಿ. ಆಸ್ಪತ್ರೆ ಮತ್ತು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಧಾನಿ ಮೋದಿ ಸಂತಾಪ
ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ X ಖಾತೆಯಲ್ಲಿ, "ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಪಟಾಕಿ ಕಾರ್ಖಾನೆ ದುರಂತದಲ್ಲಿ ಜೀವಹಾನಿಯಾಗಿರುವುದು ಅತ್ಯಂತ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು" ಎಂದು ಬರೆದಿದ್ದಾರೆ. ಇದರೊಂದಿಗೆ, ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ವಾರಸುದಾರರಿಗೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50,000 ಧನಸಹಾಯ ಘೋಷಿಸಲಾಗಿದೆ.
ಏತನ್ಮಧ್ಯೆ, ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಘಟಕ ನಡೆಸುತ್ತಿದ್ದ ಮಾಲೀಕ ಮೆಹುಲ್ ದೋಡಿಯಾ ವಿರುದ್ಧ ಪೊಲೀಸರು ಕಠಿಣ ಸ್ಫೋಟಕ ಕಾಯ್ದೆಯಡಿ FIR ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.