ನವದೆಹಲಿ: ರಣದೀಪ್ ಹೂಡಾ ಅವರ 'ಸ್ವಾತಂತ್ರ್ಯವೀರ ಸಾವರ್ಕರ್' ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಮಂಡಳಿ ವಿರುದ್ಧ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿನ ಪ್ರಸ್ತುತ ರಾಜಕೀಯ ವಾತಾವರಣ ಎಷ್ಟರಮಟ್ಟಿಗೆ ಬದಲಾಗಿದೆ ಎಂದರೆ, "ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾವೂ ಪ್ರಶಸ್ತಿ ಪಡೆಯಬಹುದು" ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.
'ಸ್ವಾತಂತ್ರ್ಯವೀರ ಸಾವರ್ಕರ್' ಚಿತ್ರಕ್ಕಾಗಿ ಹೂಡಾ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ' ಪ್ರಶಸ್ತಿ ನೀಡಲಾಗಿದೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾವರ್ಕರ್' ಕುರಿತು ನಾನು ಹೆಚ್ಚೇನೂ ಹೇಳಬೇಕಿಲ್ಲವಲ್ಲವೇ? ಭಾರತದಲ್ಲಿ ನಿರ್ಮಾಣವಾಗುತ್ತಿರುವ ಪ್ರಸ್ತುತ ಪರಿಸ್ಥಿತಿ ಎಷ್ಟರಮಟ್ಟಿಗೆ ಇದೆಯೆಂದರೆ, ಗೋಡ್ಸೆ ಕುರಿತಾದ ಚಿತ್ರವೂ ಪ್ರಶಸ್ತಿ ಪಡೆಯಬಹುದು. ಇದು ಅತ್ಯಂತ ದುಃಖಕರ ಸಂಗತಿ ಎಂದು ಅವರು ಹೇಳಿದರು.
'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿ ಗೆದ್ದ 'ಆರ್ಟಿಕಲ್ 370' (Article 370) ಚಿತ್ರದ ಕುರಿತು ಕೇಳಿದಾಗ, ಆ ಚಿತ್ರವನ್ನು ನೋಡಿಲ್ಲ. ಆದ್ದರಿಂದ ಅದರ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು. ನನಗೆ ತಿಳಿಯದ ವಿಷಯದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದಾಗ್ಯೂ, 'ಆರ್ಟಿಕಲ್ 370' ರದ್ದತಿಯನ್ನು ಭಾರತೀಯ ಸಂವಿಧಾನದ ಮೂಲ ಆಶಯ ಮತ್ತು ಘನತೆಗೆ ವಿರುದ್ಧವಾದ ಕ್ರಮ ಎಂದರು.
ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಬೇಬಿ, ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವ ಪರವಾಗಿ ಪ್ರಚಾರ ನಡೆಸಲು ಆ ಕೇಂದ್ರಾಡಳಿತ ಪ್ರದೇಶದ ನಾಯಕರು ಜುಲೈ 20 ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.
ಈ ಮಧ್ಯೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಮತ್ತು ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯರಾಜ್, ತೀರ್ಪುಗಾರರ ನಿರ್ಧಾರಗಳ ಮೇಲೆ ರಾಜಕೀಯ ಪರಿಗಣನೆಗಳು ಪ್ರಭಾವ ಬೀರಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ನಾವು ಚಿತ್ರವೊಂದನ್ನು ನೋಡುವಾಗ, ಅದು ಕೇವಲ ಒಂದು ಚಲನಚಿತ್ರವಾಗಿರುತ್ತದೆ. ನಮ್ಮ ಮುಂದೆ ರಾಜಕೀಯ ಇರುವುದಿಲ್ಲ. ಸ್ವತಃ ಚಲನಚಿತ್ರ ನಿರ್ಮಾಪಕನಾಗಿ, ತೀರ್ಪುಗಾರರ ಮಂಡಳಿಯ ಹತ್ತು ಸದಸ್ಯರೊಂದಿಗೆ ಸೇರಿ ನಾವು ಕೇವಲ ಚಿತ್ರಗಳನ್ನು ವೀಕ್ಷಿಸಿದ್ದೇವೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.