ಹೈದರಾಬಾದ್: ಮಹಿಳಾ ಐಪಿಎಸ್ ಪ್ರೊಬೇಷನರಿ ಅಧಿಕಾರಿಗೆ ಸಹೋದ್ಯೋಗಿ ತರಬೇತಿ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ. ಹಿಂಬಾಲಿಸುವುದು, ಖಾಸಗಿ ವೀಡಿಯೊವನ್ನು ರೆಕಾರ್ಡ್ ಮಾಡುವುದು, ಹಲ್ಲೆ ಹಾಗೂ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ಪೊಲೀಸರು ಆರೋಪಿ ತರಬೇತಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಹೈದರಾಬಾದ್ನ ಶಿವರಾಂಪಲ್ಲಿಯಲ್ಲಿರುವ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಜುಲೈ 18 ರಂದು ಈ ಘಟನೆ ನಡೆದಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ. 30 ವರ್ಷದ ಐಪಿಎಸ್ ಪ್ರೊಬೆಷನರ್ ಸುಮಾ ಹೆಚ್.ಕೆ. ಎಂಬ ದೂರುದಾರರು, ಸಹ ತರಬೇತಿದಾರ ಉದಯ್ ಕೃಷ್ಣ ರೆಡ್ಡಿ ಕಳೆದ ಕೆಲವು ವಾರಗಳಿಂದ ತನಗೆ ನಿರಂತರ ಕಿರುಕುಳ ನೀಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಉದಯ್ ಕೃಷ್ಣ ರೆಡ್ಡಿ ಅವರು ತೀವ್ರ ಕಿರುಕುಳ ನೀಡುತ್ತಿದ್ದಾರೆ. ಇದು ಜೂನ್23ರಿಂದ ಆರಂಭವಾಗಿದ್ದು. ವಾಟ್ಸಾಪ್ನಲ್ಲಿ ಲೈಂಗಿಕವಾಗಿ ನಿಂದಿಸುವ ಸಂದೇಶ ಕಳಿಸುತ್ತಾರೆ. ಅಲ್ಲದೆ, ಪ್ರೊಬೇಷನರಿ ಅಧಿಕಾರಿಗಳ ಸಮ್ಮುಖದಲ್ಲೇ ಅವರ ತೇಜೋವಧೆ ಮಾಡುವಂತಹ ಅವಹೇಳನಕಾರಿ ಮಾತಿನಲ್ಲಿ ನಿಂದಿಸಿದ್ದಾರೆ. ಮತ್ತೊಬ್ಬ ತರಬೇತಿ ಅಧಿಕಾರಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ, ಅದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿ ನಿಂದಿಸಿದ್ದಾನೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ ಒಮ್ಮೆ ಮೊಬೈಲ್ ಕಸಿದುಕೊಂಡು ಪಾಸ್ವರ್ಡ್ ಹಾಕಿ ಓಪನ್ ಮಾಡುವಂತೆ ಬಲವಂತವಾಗಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನ ಪ್ರವೇಟ್ ಚಾಟ್ಸ್ಗಳನ್ನು ನೋಡಿದ್ದಾರೆ. ಜುಲೈ 8 ರಂದು ಫೋನ್ ಅನ್ನು ತನ್ನ ಕೋಣೆಗೆ ಕೊಂಡೊಯ್ದಿದ್ದಾರೆ ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 9 ರಂದು ಕಿರುಕುಳದ ತೀವ್ರತೆ ಹೆಚ್ಚಾಗಿದ್ದು, ಆರೋಪಿಯು ಸುಮಾ ಅವರನ್ನು ತಡೆದು, ಬಲವಂತವಾಗಿ ತನ್ನ ಕೋಣೆಗೆ ಎಳೆದುಕೊಂಡು ಹೋಗಿ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಸುಮಾ ಅವರ ಜುಟ್ಟು ಹಿಡಿದು ಎಳೆದಿದ್ದಲ್ಲದೆ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಕುತ್ತಿಗೆಗೆ ಚಾಕು ಇಟ್ಟು ಕೋಣೆಯಿಂದ ಹೊರಹೋಗದಂತೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಆಕೆಯ ಮೈಮೇಲೆ ಕಾಂಡೋಮ್ ಪ್ಯಾಕೆಟ್ಗಳನ್ನು ಎಸೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತದನಂತರ ಜುಲೈ 10 ರಂದು ಮತ್ತೆ ಹಲ್ಲೆ ನಡೆಸಿ, ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎನ್ನುವ ಗಂಭೀರ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.
ದೂರಿನಲ್ಲಿರುವ ಅತ್ಯಂತ ಗಂಭೀರವಾದ ಆರೋಪವೆಂದರೆ, ಆರೋಪಿ ಉದಯ್ ಕೃಷ್ಣ ರೆಡ್ಡಿ ಸಂತ್ರಸ್ತೆಯ ಒಪ್ಪಿಗೆಯಿಲ್ಲದೆ ಆಕೆಯ ಖಾಸಗಿ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಸುಮಾ ಅವರ ಪತಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದಾನೆ. ಜೊತೆಗೆ, ಅಕಾಡೆಮಿಯ ಇತರರ ಬಳಿ ಸುಮಾ ಅವರ ಬಗ್ಗೆ ಸುಳ್ಳು ಮತ್ತು ಅವಹೇಳನಕಾರಿ ಮಾಹಿತಿಗಳನ್ನು ಹರಡುವ ಮೂಲಕ ಅವರ ಘನತೆಗೆ ಧಕ್ಕೆ ತರಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಮಾರ ದೂರಿನ ಅನ್ವಯ ಅತ್ತಾಪುರ ಪೊಲೀಸರು ಆರೋಪಿ ಉದಯ್ ಕೃಷ್ಣ ರೆಡ್ಡಿ ವಿರುದ್ಧ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ, ಬೆನ್ನಟ್ಟುವುದು, ಬೆದರಿಕೆ ಹಾಗೂ ಮಹಿಳೆಯ ಶೀಲಕ್ಕೆ ಧಕ್ಕೆ ತಂದಿರುವ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.