ನವದೆಹಲಿ: ನೀಟ್ ಅಕ್ರಮ ಖಂಡಿಸಿ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಗುರುಗ್ರಾಮದ ಆಸ್ಪತ್ರೆಯಿಂದ ತಮ್ಮ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತಿದ್ದು, ಅವರ ಪತ್ನಿ ಗೀತಾಂಜಲಿ ಆಂಗ್ಮೋ ಅವರು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಬಳಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನು ಪ್ರಶ್ನಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ನಿಜವಾದ ಬೆಂಬಲ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಗೀತಾಂಜಲಿ ಹೇಳಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಗೀತಾಂಜಲಿ ಅವರು, ರಾಜಕೀಯ ನಾಯಕರು ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆ ನಡೆಸುವ ಬದಲು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸೇರಿಕೊಳ್ಳಬೇಕಿತ್ತು ಎಂದಿದ್ದಾರೆ.
ವಾಂಗ್ಚುಕ್ ಅವರ ಸಾರ್ವಜನಿಕ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಆದರೆ ಜನ ಪ್ರಾಮಾಣಿಕ ಪ್ರತಿಭಟನೆ ಮತ್ತು ಸಾಂಕೇತಿಕ ಪ್ರತಿಭಟನೆಯ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲರು ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನನ್ನ ಪತಿ ಸೋನಮ್ ವಾಂಗ್ಚುಕ್ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಜಂತರ್-ಮಂತರ್ನಲ್ಲಿ ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಆದರೆ ಅಲ್ಲಿಗೆ ಒಂದು ದಿನವೂ ಬರದ ರಾಹುಲ್ ಗಾಂಧಿ, ಪ್ರಧಾನಿಗಳ ನಿವಾಸ ಎದುರುಗಡೆ ಪ್ರತಿಭಟನೆ ನಡೆಸಿರುವುದು ನನಗೆ ಸರಿ ಕಾಣಿಸುತ್ತಿಲ್ಲ. ರಾಹುಲ್ ಅವರ ಈ ಪ್ರತಿಭಟನೆಯಲ್ಲಿ ಪ್ರಾಮಾಣಿಕತೆಯಿಲ್ಲ ಎಂದು ಗೀತಾಂಜಲಿ ಆರೋಪಿದ್ದಾರೆ.
ನಮ್ಮ ಈ ಹೋರಾಟ ರಾಜಕೀಯ ಪ್ರೇರಿತ ಅಥವಾ ರಾಜಕೀಯ ಬೆಂಬಲಿತ ಹೋರಾಟವಲ್ಲ. ಬದಲಾಗಿ ಇದು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದಿದ್ದಾರೆ. ನಮ್ಮ ಹೋರಾಟವನ್ನು ಬೆಂಬಲಿಸಿ ಯಾರೇ ನಮ್ಮ ಜೊತೆ ಬಂದರೂ ಅವರನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಾವು ಯಾವುದೇ ಪಕ್ಷದ ಕಾರ್ಯಕರ್ತರಂತೆ ವರ್ತಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.