

ಬೆಂಗಳೂರು: ಕನ್ನಡತಿ ಹಾಗೂ ಕರ್ಣ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಮೇಲೆ ಸಿಂಹವೊಂದು ದಾಳಿ ಮಾಡಿದ್ದು, ಈ ಕುರಿತು ಸ್ವತಃ ನಟನೇ ಸ್ಪಷ್ಟನೆ ನೀಡಿದ್ದಾರೆ.
ಹೌದು.. ಸಿಂಹ ಪಳಗಿಸುವಿಕೆ ತರಬೇತಿ ವೇಳೆ ನಟ ಕಿರಣ್ ರಾಜ್ ಮೇಲೆ ಸಿಂಹ ದಾಳಿ ಮಾಡಿತ್ತು. ಈ ಕುರಿತ ವಿಡಿಯೋವನ್ನು ಸ್ವತಃ ನಟ ಕಿರಣ್ ರಾಜ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ವ್ಯಾಪಕ ವೈರಲ್ ಆಗಿ, ಕಿರಣ್ ರಾಜ್ ಆರೋಗ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಇದೀಗ ತಮ್ಮ ಮೇಲಿನ ಸಿಂಹ ದಾಳಿ ಮಾಡಿದ ಕುರಿತು ಸ್ವತಃ ನಟ ಕಿರಣ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಆಗಿದ್ದೇನು?
ನಟ ಕಿರಣ್ರಾಜ್ ಸಿನಿಮಾವೊಂದರ ನಿಮಿತ್ತ ತರಬೇತಿಗಾಗಿ ಸಿಂಹಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಆ ತರಬೇತಿ ವೇಳೆಗಿನ ವೀಡಿಯೋ ಅಪ್ಲೋಡ್ ಮಾಡಿದ್ದು ಅದರಲ್ಲಿ ಕಿರಣ್ ರಾಜ್ ಅವರ ಮೇಲೆ ಸಿಂಹ ದಾಳಿ ಮಾಡಿದ ಕ್ಲಿಪ್ಗಳಿವೆ.
ಆ ವಿಡಿಯೋದಲ್ಲಿ ಸಿಂಹವೊಂದು ತರಬೇತಿದಾರ ಪಕ್ಕದಲ್ಲಿರುವಾಗಲೇ ನಟ ಕಿರಣ್ ರಾಜ್ ಮೇಲೆ ಹಲ್ಲೆಗೆ ಮುಂದಾಗಿದೆ. ಅಷ್ಟೊತ್ತಿಗೆ ಸಹಾಯಕರೆಲ್ಲ ಸೇರಿ ಸಿಂಹದಿಂದ ನಟನನ್ನು ಪಾರು ಮಾಡುತ್ತಾರೆ.
ಅಭಿಮಾನಿಗಳು, ಸ್ನೇಹಿತರಲ್ಲಿ ಆತಂಕ
ಈ ವಿಡಿಯೋ ನೋಡಿ ಅವರ ಅಭಿಮಾನಿಗಳು, ಸ್ನೇಹಿತರು ಗಾಬರಿ ಬಿದ್ದಿದ್ದಾರೆ. ನಟಿ ರಮೋಲ ಸೇರಿದಂತೆ, ಅನೇಕ ಮಂದಿ ಫ್ಯಾನ್ಸ್ ಕಿರಣ್ ರಾಜ್ ಅವರಿಗೆ ಮೆಸೇಜ್ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಅವರ ಪೇಜ್ನಲ್ಲಿ ಈ ಬಗ್ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
ಭಯಪಡಬೇಡಿ, ನಾನು ಆರಾಮಾಗಿದ್ದೇನೆ ಎಂದ ನಟ
ತನ್ನ ಮೇಲೆ ಸಿಂಹದ ದಾಳಿಯ ವೀಡಿಯೋ ವೈರಲ್ ಆಗುತ್ತಿರುವುದನ್ನು ಕಂಡು ನಟ ಕಿರಣ್ರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ʼನನ್ನ ಮುಂದಿನ ಪ್ರಾಜೆಕ್ಟ್ಗಾಗಿ ರಾಕಿ ಎಂಬ ಸಿಂಹದ ಜೊತೆಗೆ ತರಬೇತಿಯಲ್ಲಿದ್ದೆ. ನನ್ನ ಮುಂದಿನ ಪ್ರಾಜೆಕ್ಟ್ಗಾಗಿ ನಾನು ಅವನ ಜೊತೆಗೆ ತರಬೇತಿ ಪಡೆಯುತ್ತಿದ್ದೇನೆ. ನಾನು ಅವನೊಂದಿಗೆ ಫ್ರೆಂಡ್ಶಿಪ್ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಅದರ ಗ್ಲಿಂಪ್ಸ್ ಅನ್ನು ಶೇರ್ ಮಾಡಿದ್ದೆ. ಅದು ಸಾಕಷ್ಟು ಕಡೆ ಶೇರ್ ಆಗಿರುವುದು ನನ್ನ ಗಮನಕ್ಕೆ ಬಂದಿದೆ.
ಈ ಸಂದರ್ಭ ನಾನು ಹೇಳುವುದೇನೆಂದರೆ ದಯವಿಟ್ಟು ಅದನ್ನು ಬೇರೆ ಕ್ಯಾಪ್ಶನ್ ಹಾಕಿ ಸ್ಪ್ರೆಡ್ ಮಾಡಬೇಡಿ, ಇದರಿಂದ ಜನ ಪ್ಯಾನಿಕ್ ಆಗುತ್ತಾರೆ. ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ರಾಕಿಯ ಜೊತೆಗೆ ನಾನು ಚಿಕ್ಕವಯಸ್ಸಿಂದಲೇ ಆಟ ಆಡಿದ್ದೀನಿ. ಮತ್ತು ಈ ಜಾಗ ಬಹಳ ಸೇಫ್ ಆಗಿದೆ. ಅವನ ಜೊತೆಗೆ ನನಗೊಂದು ಬಾಂಡ್ ಇದೆ. ಅಲ್ಲಿ ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಲ್ಲರ ಕಾಳಜಿಗಾಗಿ ಧನ್ಯವಾದಗಳುʼ ಎಂದಿದ್ದಾರೆ.
ಸಿಂಹ ಪಳಗಿಸುವ ಬಗ್ಗೆ ಪಾಠ
ಸಿಂಹವು ಯಾವಾಗಲೂ ನಿಮ್ಮನ್ನು ಕೆಳಗೆ ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಯಾವಾಗಲೂ ಯಾವುದಾದರೂ ಗಟ್ಟಿಯಾದ ಆಧಾರದ ಕಡೆಗೆ ಒರಗಿ ನಿಲ್ಲಬೇಕು. ಸಿಂಹದಿಂದ ದೂರ ಸರಿಯುವಾಗಲೂ ನಿಮ್ಮ ಮುಖ ಅದರ ಕಡೆಗೇ ಇರಬೇಕು. ಸಿಂಹಗಳಿಗೆ ನಿಮ್ಮ ಕಣ್ಣುಗಳ ಭಾವನೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುತ್ತದೆ. ಅವು ನಿಮ್ಮನ್ನು ಅಪ್ಪಿಕೊಳ್ಳಲು ಮತ್ತು ಹತ್ತಿರವಾಗಿ ಬೆರೆಯಲು ಇಷ್ಟಪಡುತ್ತದೆ ಎಂಬ ವಿವರಗಳನ್ನೂ ಕಿರಣ್ರಾಜ್ ನೀಡಿದ್ದಾರೆ.