ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ಬುಧವಾರ ವರದಿ ಮಾಡಿದ್ದ ಮಾಧ್ಯಮಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದೇನೆ ಎಂದು ಹೇಳುವ ಮಾಧ್ಯಮ ವರದಿಗಳು "ಅಜಾಗರೂಕ ವರದಿ" ಮಾಡಿವೆ. ಇದು ಸುಳ್ಳು ಸುದ್ದಿ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯ ಕಾಂತ್ ಅವರು ಟೀಕಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಂದೆ ಯಾವುದೇ ರಿಟ್ ಅರ್ಜಿ ಸಲ್ಲಿಸಲಾಗಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.
ಹಿರಿಯ ವಕೀಲ ಶೋಯೆಬ್ ಆಲಂ ಪಟ್ಟಿ ಮಾಡಲು ಮತ್ತೊಂದು ವಿಷಯವನ್ನು ಪ್ರಸ್ತಾಪಿಸಿದಾಗ ಸಿಜೆಐ ಮುಕ್ತ ನ್ಯಾಯಾಲಯದಲ್ಲಿ ಈ ಹೇಳಿಕೆ ನೀಡಿದ್ದಾರೆ.
"ನಾನು ಈ ವಿಷಯವನ್ನು ಪಟ್ಟಿ ಮಾಡಲು ನಿರಾಕರಿಸಿದ್ದೇನೆ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಇದು ಕೇವಲ ಪ್ರಾತಿನಿಧ್ಯವಾಗಿತ್ತು" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ವರದಿಯನ್ನು "ಬೇಜವಾಬ್ದಾರಿ ಮತ್ತು ಅಜಾಗರೂಕ" ಎಂದು ಟೀಕಿಸಿದ ಸಿಜೆಐ, "ಕಳೆದ ಎರಡು ದಿನಗಳಲ್ಲಿ, ಒಂದು ಅರ್ಜಿಯನ್ನು ಪಟ್ಟಿ ಮಾಡಲು ನಿರಾಕರಿಸಲಾಗಿದೆ ಎಂದು ಸಂಪೂರ್ಣವಾಗಿ ಸುಳ್ಳು ಹೇಳಿಕೆ ನೀಡಲಾಗಿದೆ. ಬೆಳಗ್ಗೆ 10 ಗಂಟೆಯವರೆಗೆ, ಒಂದೇ ಒಂದು ಪುಟವನ್ನು ಸಲ್ಲಿಸಲಾಗಿಲ್ಲ. ಅದು ಒಂದು ಪ್ರಾತಿನಿಧ್ಯ... ಆ ಮಿಶ್ರಾ ಅಥವಾ ಯಾರೋ ಕಳುಹಿಸಿದ್ದಾರೆ. ನಾನು ಪ್ರಾತಿನಿಧ್ಯವನ್ನು ರಿಟ್ ಅರ್ಜಿಯಾಗಿ ಹೇಗೆ ಪರಿಗಣಿಸಬಹುದು? ಮತ್ತು ಜನರು ಇದನ್ನು ಅಜಾಗರೂಕತೆಯಿಂದ ವರದಿ ಮಾಡಲು ಪ್ರಾರಂಭಿಸುತ್ತಾರೆ" ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.