ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಸೋಮವಾರ ಗುರುಗ್ರಾಮ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಮ್ಮ ಪತ್ನಿ ಗೀತಾಂಜಲಿ ಆಂಗ್ಮೋ ಅವರೊಂದಿಗೆ ರಾಜ್ಘಾಟ್ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಂಗ್ಚುಕ್, ಇತ್ತೀಚಿನ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದ ವಿದ್ಯಾರ್ಥಿ ಚಳುವಳಿ ಕುರಿತು ಪ್ರಸ್ತಾಪಿಸುತ್ತಾ, ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುವವರ ರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು.
ಈ ದೇಶದ ಯುವ ಜನತೆ, ಸಾಮಾನ್ಯ ಜನರು ಮತ್ತು ಎಲ್ಲಾ ನಾಗರಿಕರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಹಾಗೆಯೇ, ಈ ಹೋರಾಟವನ್ನು ಅತ್ಯಂತ ಶಾಂತಿಯುತವಾಗಿ ಮುನ್ನಡೆಸಿದ ಹಿರಿಯರು, ಎಲ್ಲಾ ವಯಸ್ಸಿನ ಜನರು ಮತ್ತು ಯುವ ಸಂಘಟಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಯಾವುದೇ ನಿರ್ಣಯ ಅಥವಾ ಸಾಧನೆ ಮಾಡಿದ್ದರೆ ಅದು ನಮ್ಮ ತೋಳ್ಬಲದಿಂದಲೋ ಅಥವಾ ಲಾಠಿ ಹಾಗೂ ಕಲ್ಲುಗಳ ಬಳಕೆಯಿಂದಲೋ ಮಾಡಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದಲಾಗಿ, ಶಾಂತಿಗಾಗಿ ನಾವು ಮಾಡಿದ ಮನವಿಗಳು ಮತ್ತು ನಾವೇ ಸ್ವತಃ ಅನುಭವಿಸಿದ ಕಷ್ಟ-ನಷ್ಟಗಳ ಮೂಲಕ ಅದು ಸಾಧ್ಯವಾಯಿತು. ಮಹಾತ್ಮ ಗಾಂಧಿಯವರನ್ನು ಸ್ಮರಿಸಲು ಮತ್ತು ಇಂದಿನ ಕಾಲಘಟ್ಟದಲ್ಲಿ ಅವರ ಮಾರ್ಗಗಳ ಪ್ರಸ್ತುತತೆ ಪುನರುಚ್ಚರಿಸಲು ರಾಜ್ಘಾಟ್ಗೆ ಬಂದಿರುವುದಾಗಿ ವಾಂಗ್ಚುಕ್ ಹೇಳಿದರು.
ಇದಕ್ಕೂ ಮುನ್ನ, ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಾಗಲೂ ಮಹಾತ್ಮ ಗಾಂಧಿಯವರ ಶಾಂತಿಯ ಮಾರ್ಗವು ಒಂದು ಶತಮಾನದ ನಂತರವೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಅಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುವಂತೆ ಭಾರತ ಹಾಗೂ ವಿಶ್ವದಾದ್ಯಂತದ ಜನರಿಗೆ ಅವರು ಕರೆ ನೀಡಿದ್ದರು.
ಈ 26 ದಿನಗಳ ಉಪವಾಸ ಮತ್ತು ಹೋರಾಟ ಮುಕ್ತಾಯಗೊಂಡ ನಂತರ ಮೊದಲಿಗೆ ರಾಜಘಾಟ್ಗೆ ಬಂದು ಮಹಾತ್ಮ ಗಾಂಧಿಯವರನ್ನು ಸ್ಮರಿಸಲು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸಿದೆ. ಜೊತೆಗೆ, ಅವರು ತೋರಿಸಿಕೊಟ್ಟ ಮಾರ್ಗವು ನೂರು ವರ್ಷಗಳ ಹಿಂದೆ ಹೇಗಿತ್ತೋ, ಇಂದಿಗೂ ಅಷ್ಟೇ ಪ್ರಸ್ತುತ ಮತ್ತು ಸೂಕ್ತವಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಲು ನಾನು ಬಯಸಿದೆ. ಕಳೆದ ಐದಾರು ವರ್ಷಗಳಿಂದ ನಾವು ಲಡಾಖ್ನಲ್ಲಿ ಈ ಗಾಂಧೀಜಿಯವರ ವಿಧಾನವನ್ನು ಅಳವಡಿಸಿಕೊಂಡು ಪಾಲಿಸುತ್ತಿದ್ದೇವೆ ಮತ್ತು ಇದು ಅತ್ಯಂತ ಸೂಕ್ತ ಹಾಗೂ ಪ್ರಸ್ತುತವಾಗಿದೆ ಎಂದು ನಮಗೆ ಕಂಡುಬಂದಿದೆ ಎಂದರು.
ಆದಾಗ್ಯೂ, ರಾಷ್ಟ್ರಮಟ್ಟದಲ್ಲಿ ಇದು ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ಈ ಬಾರಿ ನೂರು ವರ್ಷಗಳ ನಂತರವೂ ಇದು ರಾಷ್ಟ್ರಮಟ್ಟದಲ್ಲಿ ಪ್ರಸ್ತುತವಾಗಿದೆ ಎಂಬುದನ್ನು ಕಂಡು ನನಗೆ ಭರವಸೆ ಮೂಡಿದೆ; ಮುಂದಿನ ನೂರು ಅಥವಾ ಸಾವಿರ ವರ್ಷಗಳವರೆಗೂ ಇದು ಹೀಗೆಯೇ ಪ್ರಸ್ತುತವಾಗಿ ಉಳಿಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.