ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗೆ ಐಟಿ ದಿಗ್ಗಜ ನಂದನ್ ನಿಲೇಕಣಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚಿಸಿದ ಟಾಸ್ಕ್ ಫೋರ್ಸ್ ಗೆ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ನೇಮಕ ಮಾಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕಮಿಟಿ ವಿರುದ್ಧವೇ ಇದೀಗ ಕಾಂಗ್ರೆಸ್ ನಾಯಕರು ಅಪಸ್ವರ ಎತ್ತಿದ್ದಾರೆ.
ಸಂಸತ್ತಿನಲ್ಲಿ ಮಂಗಳವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೊಸದೊಂದು ಸಂಘರ್ಷದ ಸನ್ನಿವೇಶ ನಿರ್ಮಾಣವಾಯಿತು. ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯರೊಬ್ಬರನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು "ಗೋಮೂತ್ರ ತಜ್ಞ" ಎಂದು ಕಟುವಾಗಿ ಟೀಕಿಸಿದರು.
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರಂತೂ ಟಾಸ್ಕ್ ಫೋರ್ಸ್ ಸದಸ್ಯ ಡಾ. ವಿ. ಕಾಮಕೋಟಿಯವರನ್ನು ‘ಗೋಮೂತ್ರ ತಜ್ಞ’ ಎಂದು ಜರಿದಿದ್ದಾರೆ.
ಕಾಮಕೋಟಿಯನ್ನು 'ಗೋಮುತ್ರ ತಜ್ಞ' ಎಂದು ಟೀಕಿಸಿದ್ದು ಏಕೆ?
ತಮಿಳು ಹಬ್ಬ ಪೊಂಗಲ್ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿ ಕಾಮಕೋಟಿ ಅವರು ಮಾಡಿದ ಭಾಷಣವನ್ನು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿಯವರು "ಗೋಮೂತ್ರ ತಜ್ಞ" ಟೀಕಿಸಿದ್ದಾರೆ.
ಕಾಮಕೋಟಿಯ ಭಾಷಣದ ವಿಡಿಯೋ 2025 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಹಲವಾರು ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.
ಭಾಷಣದಲ್ಲಿ, ಕಾಮಕೋಟಿಯವರು, ತೀವ್ರ ಜ್ವರದಿಂದ ಬಳಲತ್ತಿದ್ದ ಸನ್ಯಾಸಿ ಗೋಮೂತ್ರ ಕುಡಿದ ನಂತರ ಚೇತರಿಸಿಕೊಂಡ ಕಥೆಯನ್ನು ಹೇಳಿದ್ದರು. "ಒಬ್ಬ ಸನ್ಯಾಸಿ ಇದ್ದರು... ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಜನ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲು ಬಯಸಿದ್ದರು. ಆದರೆ ಆ ಸನ್ಯಾಸಿ... ತಕ್ಷಣವೇ ದನದ ಕೊಟ್ಟಿಗೆಗೆ ಹೋಗಿ, ಸ್ವಲ್ಪ ಗೋಮೂತ್ರ ತೆಗೆದುಕೊಂಡು ಅದನ್ನು ಕುಡಿದರು. 15 ನಿಮಿಷಗಳಲ್ಲಿ ಅವನ ಜ್ವರ ಮಾಯವಾಯಿತು" ಎಂದು ಹೇಳಿದ್ದರು.
ಕಾಮಕೋಟಿಯವರ ಪ್ರಕಾರ, ಗೋಮೂತ್ರವು "ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು". ಕರುಳಿನ ಸಿಂಡ್ರೋಮ್ ಸೇರಿದಂತೆ ಹೊಟ್ಟೆಯ ಕಾಯಿಲೆಗಳಿಗೆ ಇದು ಉತ್ತಮ ಔಷಧಿ.
ಅಷ್ಟಕ್ಕೂ ಯಾರು ಈ ಕಾಮಕೋಟಿ?
ಪ್ರಸ್ತುತ ಐಐಟಿ ಮದ್ರಾಸ್ ನ ನಿರ್ದೇಶಕರಾಗಿರುವ ವಿ ಕಾಮಕೋಟಿ ಅವರು, ಕಂಪ್ಯೂಟರ್ ಆರ್ಕಿಟೆಕ್ಚರ್ ಸಂಶೋಧನೆ ಹಾಗೂ ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಭಾರತದ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲುವ ಇವರು, ಆರ್ ಎಸ್ ಎಸ್ ಜೊತೆ ಗುರುತಿಸಿಕೊಂಡಿದ್ದಾರೆ.