ಕೊಲ್ಕೋತ್ತಾ: ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಿವೃತ್ತ ಸರ್ಕಾರಿ ಬಸ್ ಚಾಲಕರೊಬ್ಬರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ನಿವೃತ್ತ ಚಾಲಕನ ಮನೆಯಲ್ಲಿ ಬರೋಬ್ಬರಿ 15 ಕೆ.ಜಿ ಚಿನ್ನ ಮತ್ತು 20 ಕೋಟಿ ರೂ. ಹಣ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮರಳು ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ನಿವೃತ್ತ ಸರ್ಕಾರಿ ಬಸ್ ಚಾಲಕನ (ಈಗ ಕಲ್ಲು ವ್ಯಾಪಾರಿ) ಮನೆ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಸಂಪತ್ತನ್ನ ಕಂಡು ಬೆಚ್ಚಿಬಿದ್ದಿದ್ದಾರೆ.
ನಿವೃತ್ತ ಸರ್ಕಾರಿ ಬಸ್ ಚಾಲಕನ ಮನೆ ಮೇಲೆ ದಾಳಿ ನಡೆಸಿದ ಬಂಗಾಳ ಪೊಲೀಸರು ಕನಿಷ್ಠ 28.5 ಕೋಟಿ ನಗದು, 15 ಚಿನ್ನ ಜಪ್ತಿಮಾಡಿದ್ದಾರೆ. ಜಪ್ತಿ ಮಾಡಿದ ಚಿನ್ನದ ಮೌಲ್ಯ 20 ಕೋಟಿ ರೂ.ಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ನಿವೃತ್ತ ಬಸ್ ಚಾಲಕ ಮಿನಾರ್ ಮತ್ತು ಅವರ ಮಗನನ್ನ ಬಂಧಿಸಿದ್ದಾರೆ. ಜೊತೆಗೆ ಇತರ ಸ್ಥಳಗಳಲ್ಲೂ ಹಣ ಸಂಗ್ರಹಿಸಲಾಗಿದೆಯೇ ಎಂಬ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಮಿನಾರ್, ಎಸ್ಕೇಪ್ ಆಗಿರುವ ಟಿಲ್ಲು ಮೊಂಡಲ್ ಅಲಿಯಾಸ್ ಮೊಹಮ್ಮದ್ ನಜೀಬುದ್ದೀನ್ ಅವರ ಸೋದರ ಮಾವ.
ಪೊಲೀಸರು ವಶಪಡಿಸಿಕೊಂಡ ನಗದನ್ನು ಸಾಗಿಸಲು ಸುಮಾರು 35 ಚೀಲಗಳನ್ನು ಬಳಸಲಾಗಿತ್ತು. ಅಲ್ಲದೆ, ಈ ಅಪಾರ ಪ್ರಮಾಣದ ಹಣವನ್ನ ಎಣಿಸಲು 5 ನಗದು ಎಣಿಕೆ ಯಂತ್ರಗಳನ್ನೂ ಪೊಲೀಸರು ತರಿಸಬೇಕಾಯಿತು. ಜೊತೆಗೆ, ವಶಕ್ಕೆ ಪಡೆಯಲಾದ ನಗದನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು 5 ದೊಡ್ಡ ಟಿನ್ ಟ್ರಂಕ್ಗಳನ್ನು ತರಲಾಗಿತ್ತು ಎಂದು ವರದಿಯಾಗಿದೆ.
ಪೋಲಿಸ್ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಾದ್ಯಂತ ಇರುವ ಆರು ಕಲ್ಲು ಕೈಗಾರಿಕಾ ಕ್ಲಸ್ಟರ್ಗಳ ಪ್ರವೇಶ ದ್ವಾರಗಳಲ್ಲಿ ಚಂದಾ ಸಂಗ್ರಹಿಸುವ ಜವಾಬ್ದಾರಿಯನ್ನು ತುಳು ಮೊಂಡಲ್ ಅವರ ಏಜೆನ್ಸಿಗೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ.