ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯನ್ನು ನೋಡಿದರೆ 'ಈ ದೇಶದಲ್ಲಿರಲು ನನಗೆ ನಾಚಿಕೆಯಾಗುತ್ತಿದೆ' ಎಂದು ಹಿರಿಯ ವಕೀಲ ಮತ್ತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಕಪಿಲ್ ಸಿಬಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿ ಬಿಜೆಪಿ, ಇತರ ಪ್ರಕರಣಗಳ ಬಗ್ಗೆ ಸಿಬಲ್ ಅವರ ಮೌನವನ್ನು ಪ್ರಶ್ನಿಸಿದೆ. "ವಕೀಲರಾಗಿ ಕೋಟಿಗಟ್ಟಲೆ ಸಂಪಾದಿಸುವ; ಕಾಂಗ್ರೆಸ್ನಲ್ಲಿ ಹೆಚ್ಚಿನ ಸಮಯ ಅಧಿಕಾರ ಅನುಭವಿಸಿ, ಈಗ ಸಮಾಜವಾದಿ ಪಕ್ಷದ (ಎಸ್ಪಿ) ಬೆಂಬಲದೊಂದಿಗೆ ಸಂಸತ್ತಿನಲ್ಲಿರುವ ವ್ಯಕ್ತಿ, ಭಾರತದಲ್ಲಿರಲು ನಾಚಿಕೆಯಾಗುತ್ತಿದೆ ಎಂದು ಹೇಳುತ್ತಿದ್ದಾರೆ!... ಬಿಜೆಪಿಯೊಂದಿಗೆ ಅವರಿಗೆ ಸಮಸ್ಯೆ ಇರುವುದರಿಂದ ಅವರು ಭಾರತದ ವಿರುದ್ಧ 'ಸುಪಾರಿ' ಪಡೆಯುತ್ತಿದ್ದಾರೆ" ಎಂದು ತಿರುಗೇಟು ನೀಡಿದೆ.
ಟಿಎಂಸಿಯ ಅಭಿಷೇಕ್ ಮತ್ತು ಕಲ್ಯಾಣ್ ಬ್ಯಾನರ್ಜಿ ಅವರ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ಸಿಬಲ್, "ಇದು ನಾಚಿಕೆಗೇಡಿನ ಸಂಗತಿ, ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ಇಂತಹ ದೇಶದಲ್ಲಿ ನಾನು ವಾಸಿಸುತ್ತಿದ್ದೇನೆ. ಇಲ್ಲಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಅಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಮಾಡಲು ಯಾವುದೇ ಮಾರ್ಗವನ್ನು ಬೇಕಾದ್ರೂ ಬಳಸುತ್ತಿದೆ. ಆಡಳಿತ ಪಕ್ಷವೇ, ಪ್ರತಿಪಕ್ಷದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
"ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿ ಮಾಡಿದ ರೀತಿಯನ್ನು ನೋಡಿದಾಗ ನನಗೆ ಆಘಾತವಾಯಿತು. ಈಗ, ಸ್ಪಷ್ಟವಾಗಿ, ಇದು ಪೂರ್ವಯೋಜಿತ ದಾಳಿಯಾಗಿತ್ತು. ಅದೃಷ್ಟವಶಾತ್, ಅವರು ಹೆಲ್ಮೆಟ್ ಧರಿಸಿದ್ದರು. ಇಲ್ಲದಿದ್ದರೆ ಅವರಿಗೆ ಮಾರಕ ಗಾಯವಾಗುತ್ತಿತ್ತು" ಎಂದು ಸಿಬಲ್ ಹೇಳಿದ್ದಾರೆ.