ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮಂಗಳವಾರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸುಮಾರು 150 ರೌಡಿ ಶೀಟರ್ ಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕ್ಷಮೆ ಕೇಳುವ ಪೋಸ್ಟರ್ಗಳೊಂದಿಗೆ ಕೈಗಳನ್ನು ಎತ್ತಿ ಪ್ರತಿಜ್ಞೆ ಮಾಡಿದರು.
ಪೊಲೀಸ್ ಪುನರ್ವಸತಿ ಉಪಕ್ರಮದಡಿಯಲ್ಲಿ ಇನ್ನುಮುಂದೆ ಅಪರಾಧ ಕೃತ್ಯಗಳನ್ನು ಮಾಡುವುದಿಲ್ಲ ಎಂದು ರೌಡಿಗಳು ಪ್ರತಿಜ್ಞೆ ಮಾಡಿದರು.
ಪುನರ್ವಸತಿ ಕಾರ್ಯಕ್ರಮದ ಭಾಗವಾಗಿ, ಯುವಕರು ಮತ್ತು ಮಧ್ಯವಯಸ್ಕ ರೌಡಿ ಶೀಟರ್ ಗಳು ತಮ್ಮ ಕೈಗಳನ್ನು ಮೇಲಕ್ಕೆತ್ತಿ, "ನಾವು ಭವಿಷ್ಯದಲ್ಲಿ ಯಾವುದೇ ಅಪರಾಧ ಮಾಡುವುದಿಲ್ಲ ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವುದಿಲ್ಲ ಎಂದು ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಪ್ರತಿಜ್ಞೆ ಮಾಡಿದರು.
ಹಲವು ರೌಡಿ ಶೀಟರ್ ಗಳು 'ಯೋಗಿ ಜೀ ನಮ್ಮನ್ನು ಕ್ಷಮಿಸಿ' ಎಂಬ ಪೋಸ್ಟ್ ಗಳನ್ನು ಹಿಡಿದು, ತಾವು ಮತ್ತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಹೇಳಿದರು ಮತ್ತು ಸಿಎಂ ತಮ್ಮನ್ನು ಕ್ಷಮಿಸುತ್ತಾರೆ ಎಂಬ ಭರವಸೆ ಇದೆ ಎಂದರು.
"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ನಾವು ಭವಿಷ್ಯದಲ್ಲಿ ಅಪರಾಧಗಳನ್ನು ಮಾಡುವುದಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದು ಹಲವು ಫಲಕಗಳು ಹಿಡಿದು ರೌಡಿ ಶೀಟರ್ ಗಳು ಬಂದಿದ್ದರು.
ತಾನು ಮತ್ತೆ ಯಾವುದೇ ಅಪರಾಧ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಮತ್ತು ಕಾನೂನು ನನಗೆ ಬೆಂಬಲ ನೀಡುತ್ತದೆ ಎಂದು ಆಶಿಸುತ್ತೇನೆ ಎಂದು ಆರೋಪಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
'ಆಪರೇಷನ್ ಕ್ಲೀನ್ ಸ್ವೀಪ್' ಅಡಿಯಲ್ಲಿ ಗಾಜಿಯಾಬಾದ್ನಾದ್ಯಂತ ನಡೆಸಲಾಗುತ್ತಿರುವ ಪರಿಶೀಲನಾ ಅಭಿಯಾನದ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ(ಟ್ರಾನ್ಸ್-ಹಿಂಡನ್) ಧವಲ್ ಜೈಸ್ವಾಲ್ ಹೇಳಿದ್ದಾರೆ.
"ಅಪರಾಧಿಗಳಾಗಿರುವ, ಕೇಸ್ ಗಳನ್ನು ಹೊಂದಿರುವ ಅಥವಾ ಅಂತಹ ಚಟುವಟಿಕೆಗಳ ಇತಿಹಾಸ ಹೊಂದಿರುವ ಎಲ್ಲಾ ವ್ಯಕ್ತಿಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ನಿವಾಸ, ಚಲನವಲನಗಳು ಮತ್ತು ಪ್ರಸ್ತುತ ಚಟುವಟಿಕೆಗಳನ್ನು ದಾಖಲಿಸಲಾಗುತ್ತಿದೆ" ಎಂದು ಅವರು ತಿಳಿಸಿದರು.