ಮಥುರಾ: ಯುವಕರು ಮತ್ತು ಮಹಿಳೆಯರನ್ನು ಬ್ರೈನ್ ವಾಶ್ ಮಾಡಿದ್ದ ಮತ್ತು ಮಹಿಳಾ ಭಕ್ತರನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಸ್ವಯಂ ಘೋಷಿತ ಧರ್ಮ ಪ್ರಚಾರಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 30 ವರ್ಷದ ಅಭಿಷೇಕ್ ಅಲಿಯಾಸ್ ಆದಿಕರ್ತ ನಾರಾಯಣ್ ದಾಸ್ ಎಂದು ಗುರುತಿಸಲಾಗಿದೆ.
ಈತ ಒಡಿಶಾದ ಭುವನೇಶ್ವರ ಮೂಲದವನಾಗಿದ್ದು, ರಾಧಾಕುಂಡ್ನ ಶೇರ್ಗರಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಯು ಟ್ಯೂಬ್ ನಲ್ಲಿ ಭಗವದ್ಗೀತೆ ಪ್ರವಚನಗಳನ್ನು ನೀಡುವ ಧಾರ್ಮಿಕ ಪ್ರಚಾರಕನಾಗಿ ಬಿಂಬಿಸಿಕೊಂಡದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾವಂತ ಮಹಿಳೆಯರು ಸೇರಿದಂತೆ ಹಲವಾರು ಯುವಕರು ಆತನ ಪ್ರಭಾವಕ್ಕೆ ಒಳಗಾಗಿದ್ದರು ಮತ್ತು ನಂತರ ಆತನ ನಿವಾಸದಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಮಹಿಳೆಯ ದೂರಿನ ನಂತರ ಬಂಧನ: ಮೇ 25, 2026 ರಂದು ಗೋವರ್ಧನ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ದೂರಿನ ಆಧಾರದ ಮೇಲೆ, ಲೈಂಗಿಕ ಶೋಷಣೆ ಮತ್ತು ಬ್ರೇನ್ ವಾಶ್ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾದ ವಿವಿಧ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಗಳ ತನಿಖೆ ಮತ್ತು ಪರಿಶೀಲನೆಯ ನಂತರ, ಗೋವರ್ಧನ್ ಪೊಲೀಸರು ರಾಧಾಕುಂಡ್ನ ಶೇರ್ಗರಿಯಾ ಪ್ರದೇಶದಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಛತ್ತೀಸ್ಗಢದ ದೂರುದಾರರು ಮೇ 25 ರಂದು ಗೋವರ್ಧನ್ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಎಫ್ಐಆರ್ ದಾಖಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಆರೋಪಿ ಬಂಧನಕ್ಕೆ ಮುಂದಾದರು.ಆರೋಪಿ ಜೊತೆಗೆ ವಾಸವಾಗಿದ್ದ ಯುವಕರು ಮತ್ತು ಮಹಿಳೆಯರನ್ನು ಸುರಕ್ಷಿತವಾಗಿ ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.