ತ್ರಿಪುರಾ: ಭಾರತದ ಗಡಿ ಸುರಕ್ಷತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರದ "ಸ್ಮಾರ್ಟ್ ಬಾರ್ಡರ್" ಯೋಜನೆಯು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ.
"ಸ್ಮಾರ್ಟ್ ಬಾರ್ಡರ್" ಯೋಜನೆಯು ಹೊಸ ಭದ್ರತಾ ಗ್ರಿಡ್, ಅತ್ಯಾಧುನಿಕ ತಂತ್ರಜ್ಞಾನ, ಸ್ಥಳೀಯ ಆಡಳಿತ ಮತ್ತು ಗಡಿ ಕಾವಲುಗಾರರನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಇಂದು ತ್ರಿಪುರಾದ ಲಂಕಾಮುರಾ ಬಾರ್ಡರ್ ಔಟ್ಪೋಸ್ಟ್ನಲ್ಲಿ ಬಿಎಸ್ಎಫ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಭದ್ರತಾ ಪಡೆಗಳನ್ನು ನಿಯೋಜಿಸಿದಲ್ಲೆಲ್ಲಾ "ನಾವು ಸ್ಮಾರ್ಟ್ ಗಡಿಗಳನ್ನು ನಿರ್ಮಿಸುತ್ತೇವೆ" ಎಂದು ಹೇಳಿದರು.
"ಅತ್ಯಾಧುನಿಕ ತಂತ್ರಜ್ಞಾನ, ಸ್ಥಳೀಯ ಆಡಳಿತ ಮತ್ತು ಗಡಿ ಕಾವಲುಗಾರರನ್ನು ಒಳಗೊಂಡ ಹೊಸ ಭದ್ರತಾ ಗ್ರಿಡ್ನೊಂದಿಗೆ ಸ್ಮಾರ್ಟ್ ಗಡಿಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು" ಎಂದು ಗೃಹ ಸಚಿವರು ತಿಳಿಸಿದರು.
"ಸ್ಮಾರ್ಟ್ ಗಡಿಯ ಪರಿಕಲ್ಪನೆಯನ್ನು ದೇಶದ ಏಳರಿಂದ ಎಂಟು ಸ್ಥಳಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಗುವುದು. ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಬಿಎಸ್ಎಫ್ ಮಹಾನಿರ್ದೇಶಕರು ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಬೇಕೆಂದು ನಾನು ವಿನಂತಿಸುತ್ತೇನೆ" ಎಂದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಹೈಟೆಕ್ ಕ್ಯಾಮೆರಾಗಳು, ರಾಡಾರ್ಗಳು, ಸಂವೇದಕಗಳು, ಕಣ್ಗಾವಲು ಪರಿಕರಗಳು ಮತ್ತು ನೈಜ-ಸಮಯದ ಮೇಲ್ವಿಚಾರಣಾ ವೇದಿಕೆಗಳು ಸೇರಿದಂತೆ ಸುಧಾರಿತ ಗಡಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.