ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು. 
ದೇಶ

NEET ವಿವಾದ: ‘Cockroach Janta Party’ ಪ್ರತಿಭಟನೆಗೆ ಭಾರೀ ಬೆಂಬಲ; ಜಂತರ್ ಮಂತರ್‌ನಲ್ಲಿ ನೂರಾರು ವಿದ್ಯಾರ್ಥಿಗಳ ಧರಣಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆಯ ಬೆಂಬಲಿಗರು ಜಿರಳೆ (Cockroach) ಮುಖವಾಡಗಳನ್ನು ಧರಿಸಿ, ಕೈಯಲ್ಲಿ ಹೂವುಗಳು, ಪುಸ್ತಕಗಳು ಹಾಗೂ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ನವದೆಹಲಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ಕರೆಗೆ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಪೋಷಕರು ಸೇರಿದಂತೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಗಿಳಿದಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆಯ ಬೆಂಬಲಿಗರು ಜಿರಳೆ (Cockroach) ಮುಖವಾಡಗಳನ್ನು ಧರಿಸಿ, ಕೈಯಲ್ಲಿ ಹೂವುಗಳು, ಪುಸ್ತಕಗಳು ಹಾಗೂ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಹಲವಾರು ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸಂಘಟನೆಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವಂತೆ ಕರೆ ನೀಡಿದ್ದು, ಪೊಲೀಸರಿಗೆ ಹೂವುಗಳನ್ನು ನೀಡಿ ಗೌರವ ಸೂಚಿಸಬೇಕು ಹಾಗೂ ಪ್ರೀತಿ ಮತ್ತು ಶಾಂತಿಯ ಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದರು.

ಮೊದಲು ಸಂಸತ್ ಮಾರ್ಗ ಪೊಲೀಸ್ ಠಾಣೆಯ ಮುಂದೆ ಸೇರಲು ಬೆಂಬಲಿಗರಿಗೆ ಸೂಚಿಸಲಾಗಿತ್ತು. ಆದರೆ, ನಂತರ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ನೇರವಾಗಿ ಅಲ್ಲಿಗೆ ತೆರಳಿದರು.

ಪ್ರತಿಭಟನೆ ವೇಳೆ "ಕಾಕ್ರೋಚ್‌ಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ ಹೊರಟು ಹೋಗುತ್ತಿದ್ದಾರೆ" ಎಂಬ ಘೋಷಣೆಗಳನ್ನು ಕೂಗಲಾಗಿದ್ದು, NEET, CBSE, CUET ಹಾಗೂ SSC ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಪ್ರತಿಭಟನೆಯ ಹಿನ್ನೆಲೆ ದೆಹಲಿ ನಗರಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಂತರ್ ಮಂತರ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ದೆಹಲಿ ಗಡಿಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.

ಮೂಲಗಳ ಪ್ರಕಾರ, ಸುಮಾರು 40 ಕಂಪನಿಗಳ ಅರೆಸೈನಿಕ ಪಡೆಗಳು ದೆಹಲಿ ಪೊಲೀಸರಿಗೆ ನೆರವಾಗಲು ನಿಯೋಜಿಸಲ್ಪಟ್ಟಿದ್ದು, 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ವಿವಿಧ ಪ್ರದೇಶಗಳಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ದಿಪ್ಕೆ ಅವರ ನಿವಾಸದ ಬಳಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನಗತ್ಯ ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ, ಆರಂಭದಲ್ಲಿ ವ್ಯಂಗ್ಯಮಯ ಡಿಜಿಟಲ್ ಅಭಿಯಾನವಾಗಿ ಕಂಡರೂ, ಈಗ ದೇಶದ ಯುವಜನತೆಯ ಬೆಂಬಲದೊಂದಿಗೆ ದೊಡ್ಡ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಮತ್ತು ಜವಾಬ್ದಾರಿತನಕ್ಕಾಗಿ ಹೋರಾಟ ನಡೆಸುವುದಾಗಿ ಸಂಘಟನೆ ಹೇಳಿಕೊಂಡಿದೆ.

ಈ ಪ್ರತಿಭಟನೆಗೆ ಹೋರಾಟಗಾರ ಸೋನಂ ವಾಂಗ್ಚುಕ್ ಸಹ ಬೆಂಬಲ ಸೂಚಿಸಿದ್ದು, ಅಭಿಜೀತ್ ದಿಪ್ಕೆ ಅವರನ್ನು ಬಂಧಿಸಿದರೆ ತಾವು ಆರು ವಾರಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲಾಗಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’, ಸುಳ್ಳು ಪ್ರಚಾರದಿಂದ ಸತ್ಯ ಬದಲಾಗದು: ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಗುಡುಗಿದ ಭಾರತ

US-Iran war: ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ; ರಾಡಾರ್ ಕೇಂದ್ರಗಳ ಮೇಲೆ ಭಾರೀ ದಾಳಿ, ಹಾರ್ಮುಜ್ ಜಲಸಂಧಿ ಬಳಿ ಉದ್ವಿಗ್ನತೆ ಹೆಚ್ಚಳ..!

Mango Pachcha Movie Review: ದುಡ್ಡಿನ ಹಿಂದೆ ಓಡಿ ಡ್ರಗ್ಸ್ ದಂಧೆಗಿಳಿಯುವ ಪ್ರಶಾಂತ್: ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ ಸಂಚಿತ್; ಮಾಸ್ ಹೀರೋಗಳ ಸಾಲಿನಲ್ಲಿ ಕಿಚ್ಚನ ಅಳಿಯ ಪಚ್ಚ!

ಟ್ರಬಲ್ ಶೂಟರ್ ಡಿಕೆ. ಶಿವಕುಮಾರ್ ಸಂಧಾನ ಯಶಸ್ವಿ?: ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ..!

ನಾರ್ವೆ ಚೆಸ್ ಟೂರ್ನಿ: ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!

SCROLL FOR NEXT