ಲಖನೌ: ಅಯೋಧ್ಯೆಯ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಯಿಂದ ಕೋಟ್ಯಂತರ ರೂ. ಹಣ ಮಾಯವಾಗಿದೆ ಎಂಬ ವರದಿಗಳು ಬಂದಿವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ ಹೇಳಿದ್ದು, ಈ ಸಂಬಂಧ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಪ್ರಪಂಚದಾದ್ಯಂತದ ರಾಮನ ಭಕ್ತರಿಗೆ 'ಅತ್ಯಂತ ಸೂಕ್ಷ್ಮ' ವಿಷಯವಾಗಿದೆ. ದೇವಾಲಯದ ಟ್ರಸ್ಟ್ಗೆ 'ಅತ್ಯಂತ ಮುಜುಗರದ' ವಿಷಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯ ಮಹಂತ್ ದಿನೇಂದ್ರ ದಾಸ್, "ನನಗೆ ಭಗವಾನ್ ರಾಮನಲ್ಲಿ ಸಂಪೂರ್ಣ ನಂಬಿಕೆ ಇದೆ. ಯಾರಾದರೂ ಯಾವುದೇ ತಪ್ಪು ಕೃತ್ಯ ಎಸಗಿದ್ದರೆ, ಭಗವಾನ್ ರಾಮನು ಆ ವ್ಯಕ್ತಿಯನ್ನು ಶಿಕ್ಷಿಸುತ್ತಾನೆ. ನಮ್ಮ ಟ್ರಸ್ಟಿಗಳು ಅಂತಹ ಕೆಲಸವನ್ನು ಮಾಡುವುದಿಲ್ಲ ಎಂದಿದ್ದಾರೆ.
ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಸ್ವೀಕರಿಸುತ್ತೇವೆ. ಯಾವುದೇ ಸಂದೇಹವಿದ್ದರೆ ತನಿಖೆ ನಡೆಸಿ ಎಂದು ಅವರು ಹೇಳಿದ್ದಾರೆ. ಈ ವಿಷಯದ ಬಗ್ಗೆ ದೇವಾಲಯ ಟ್ರಸ್ಟ್ ಮತ್ತು ಸರ್ಕಾರದ 'ಮೌನ'ವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿರುವ ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ. ಸರ್ಕಾರದ ಮೌನ ಅನುಮಾನಾಸ್ಪದವಾಗಿದೆ ಎಂದು ಅವರು ಹೇಳಿದ್ದಾರೆ.
ಇದು ಸಾರ್ವಜನಿಕ ಕಳವಳಕಾರಿ ವಿಷಯವಾಗಿದ್ದು, ದೇವಾಲಯ ಟ್ರಸ್ಟ್ಗೆ ಅತ್ಯಂತ ಮುಜುಗರದ ಪರಿಸ್ಥಿತಿಯಾಗಿದೆ. ಯಾರೂ ಮುಂದೆ ಬಂದು ವಿವರಣೆ ನೀಡಲು ಸಿದ್ಧರಿಲ್ಲ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಯಾದವ್ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.