ನವದೆಹಲಿ: ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅಥವಾ ಬಡಿಸಲು ಪತ್ರಿಕೆಗಳನ್ನು ಬಳಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ನಿರ್ದೇಶನ ನೀಡಿದೆ.
ಎಫ್ಎಸ್ಎಸ್ಎಐ ನ ಪಶ್ಚಿಮ ವಲಯವು ಎಲ್ಲಾ ಆಹಾರ ಉದ್ಯಮ ನಿರ್ವಾಹಕರಿಗೆ ನಿರ್ದೇಶನ ನೀಡಿದ್ದು, ಪತ್ರಿಕೆ ಬಳಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಮುಂಬೈನಲ್ಲಿ ವಡಾಪಾವ್ ಮಾರಾಟಗಾರನೊಬ್ಬ ಆಹಾರವನ್ನು ಪತ್ರಿಕೆಯಲ್ಲಿ ಸುತ್ತಿ ನೀಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಜಂಟಿಯಾಗಿ ಕ್ರಮ ಕೈಗೊಂಡ ನಂತರ ಈ ಸಲಹಾ ಸೂಚನೆ ಹೊರಡಿಸಲಾಗಿದೆ.
ಎಫ್ಎಸ್ಎಸ್ಎಐ ಪ್ರಕಾರ, ಪತ್ರಿಕೆ ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಸೀಸ (ಲೀಡ್) ಸೇರಿದಂತೆ ಹಲವು ಅಪಾಯಕಾರಿ ರಾಸಾಯನಿಕಗಳು ಮತ್ತು ಭಾರ ಲೋಹಗಳು (ಹೆವಿ ಮೆಟಲ್ಸ್) ಇರುತ್ತವೆ. ಇವು ಆಹಾರಕ್ಕೆ ಮಿಶ್ರಣವಾಗಿ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಅಪಾಯವಿದೆ.
ಇದಲ್ಲದೆ, ಪತ್ರಿಕೆಗಳು ಅನೇಕ ಬಾರಿ ಅಸ್ವಚ್ಛ ಪರಿಸರದಲ್ಲಿ ಸಂಗ್ರಹವಾಗಿರುವುದರಿಂದ ಆಹಾರವು ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಾಣುಗಳಿಂದ ಕಲುಷಿತವಾಗುವ ಸಾಧ್ಯತೆ ಹೆಚ್ಚಿದ್ದು, ಆಹಾರದಿಂದ ಹರಡುವ ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್) ನಿಯಮಾವಳಿ-2018 ಅನ್ನು ಉಲ್ಲೇಖಿಸಿರುವ ಎಫ್ಎಸ್ಎಸ್ಎಐ, ಆಹಾರ ಸಂಗ್ರಹಿಸಲು, ಸುತ್ತಲು ಅಥವಾ ಬಡಿಸಲು ಪತ್ರಿಕೆ ಅಥವಾ ಅದೇ ರೀತಿಯ ಅನುಮೋದನೆ ಪಡೆಯದ ವಸ್ತುಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪುನರುಚ್ಚರಿಸಿದೆ.
ಬೀದಿ ಬದಿ ಆಹಾರ ಮಾರಾಟಗಾರರು, ಹೋಟೆಲ್ಗಳು, ಕ್ಲೌಡ್ ಕಿಚನ್ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಇತರೆ ಎಲ್ಲಾ ಆಹಾರ ಉದ್ಯಮಿಗಳು ಕಡ್ಡಾಯವಾಗಿ ಆಹಾರ ದರ್ಜೆಯ (ಫುಡ್-ಗ್ರೇಡ್) ಅನುಮೋದಿತ ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಗ್ರಾಹಕರೂ ಸಹ ಆಹಾರವನ್ನು ಪತ್ರಿಕೆಗಳಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತಿದೆಯೇ ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗೂ ಸುರಕ್ಷಿತ ಪ್ಯಾಕೇಜಿಂಗ್ಗೆ ಆದ್ಯತೆ ನೀಡಬೇಕು ಎಂದು ಎಫ್ಎಸ್ಎಸ್ಎಐ ಮನವಿ ಮಾಡಿದೆ.