ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ, 2022ರ ಸೆಪ್ಟೆಂಬರ್ನಲ್ಲಿ ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ತಮಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುವ ಪಿತೂರಿಯಾಗಿತ್ತು ಎಂದು ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸಚಿನ್ ಪೈಲಟ್ ಅವರನ್ನು ಹೊಸ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದನ್ನು ಗೆಹ್ಲೋಟ್ ಬಣದ ಶಾಸಕರು ವಿರೋಧಿಸಿದ್ದರು. ಈ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
'ಸೆಪ್ಟೆಂಬರ್ 25 ರಂದು ಏನಾಯಿತು ಎಂದು ಪದೇ ಪದೆ ಕೇಳಲಾಗುತ್ತದೆ. ಹೈಕಮಾಂಡ್ ವಿರುದ್ಧ ಎಂದಿಗೂ ದಂಗೆ ಏಳಲು ಸಾಧ್ಯವಿಲ್ಲ. ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 'ಸಚಿನ್ ಪೈಲಟ್' ಅವರ ಹೆಸರನ್ನು ಅಂತಿಮಗೊಳಿಸುವುದರ ವಿರುದ್ಧವಷ್ಟೇ ನಾವಿದ್ದೆವು' ಎಂದು ಹೇಳಿದರು.
'ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದರೆ ರಾಜಸ್ಥಾನದ ನಾಯಕತ್ವದ ಕುರಿತು ಚರ್ಚಿಸಲು ಸೆಪ್ಟೆಂಬರ್ 25, 2022ರಂದು ಜೈಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಕರೆಯಲಾಗಿತ್ತು. ಸಭೆಯಿಂದ ತಮ್ಮ ಆಪ್ತ ಶಾಸಕರು ದೂರ ಉಳಿದು, ಸಮಾನಾಂತರ ಸಭೆ ನಡೆಸಿದ್ದರು ಮತ್ತು ಪೈಲಟ್ ಅವರನ್ನು ಪದೋನ್ನತಿಗೊಳಿಸುವುದನ್ನು ವಿರೋಧಿಸಿ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರ ನಿವಾಸಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು' ಎಂದು ಗೆಹ್ಲೋಟ್ ಹೇಳಿದರು.
ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಬಿಕ್ಕಟ್ಟನ್ನು ಸೃಷ್ಟಿಸಿದ್ದೇನೆ ಎಂಬ ಹೇಳಿಕೆಯನ್ನು ತಿರಸ್ಕರಿಸಿದ ಗೆಹ್ಲೋಟ್, ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಪೈಲಟ್ ಮತ್ತು ಅವರ ಬೆಂಬಲಿತ ಶಾಸಕರು 2020ರಲ್ಲಿ ಹರಿಯಾಣದ ಮಾನೇಸರ್ನಲ್ಲಿ ಬೀಡುಬಿಟ್ಟಿದ್ದರು. ಈ ಕಾರಣದಿಂದಾಗಿ ಶಾಸಕರು ಅವರನ್ನು ವಿರೋಧಿಸಿದರು ಎಂದರು.
2020ರ ಬಿಕ್ಕಟ್ಟು ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಪಿತೂರಿ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಸೆಪ್ಟೆಂಬರ್ 2022ರ ಘಟನೆಗಳು ಕಾಂಗ್ರೆಸ್ ನಾಯಕತ್ವದ ವಿರುದ್ಧದ ದಂಗೆಗೆ ಸಮನಾಗಿತ್ತು ಎಂಬ ನಿರೂಪಣೆಯನ್ನು ಪೈಲಟ್ ಅವರ ಸಹಚರರು ಮುಂದಿಟ್ಟರು. 'ಮಾಧ್ಯಮಗಳು ಈ ನಿರೂಪಣೆಯನ್ನು ಹರಡಿದವು ಮತ್ತು ನಾನು ಮೌನವಾಗಿದ್ದೆ' ಎಂದು ಅವರು ಹೇಳಿದರು
'ಸಿಎಲ್ಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲು ಸಾಧ್ಯವಾಗಲಿಲ್ಲ ಎಂದು ಸೋನಿಯಾ ಗಾಂಧಿ ಅವರಿಗೆ ತಿಳಿಸಲಾಯಿತು. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದೆ ಮತ್ತು ಕ್ಷಮೆಯಾಚಿಸಿದೆ. ಆಗಿನ ಪರಿಸ್ಥಿತಿ ಇದಾಗಿತ್ತು... ಇದೊಂದು ಪಿತೂರಿ ಎಂದು ನಾನು ಭಾವಿಸುತ್ತೇನೆ. ಎಐಸಿಸಿ ವೀಕ್ಷಕರು ಇದ್ದಕ್ಕಿದ್ದಂತೆ ಬಂದರು, ವಿವಾದವಾಗಿ ಮಾರ್ಪಟ್ಟಿತು ಮತ್ತು ಇದರ ಪರಿಣಾಮವಾಗಿ, ನನ್ನ ಇಮೇಜ್ ಅಥವಾ ಖ್ಯಾತಿಗೆ ಹಾನಿಯಾಯಿತು' ಎಂದರು.
'ಮುಖ್ಯಮಂತ್ರಿಯನ್ನು ಬದಲಾಯಿಸಬೇಕೆಂದು ಹೈಕಮಾಂಡ್ ನಿರ್ಧರಿಸಿದಾಗಲೆಲ್ಲ, ಈ ಹಿಂದೆ ಹಾಲಿ ಮುಖ್ಯಮಂತ್ರಿಯೊಂದಿಗೆ ಇದ್ದ ಶೇ 90 ರಷ್ಟು ಶಾಸಕರು ಹೊಸಬರಿಗೆ ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಾರೆ. ಆದರೆ, ಹೊಸ ಮುಖ್ಯಮಂತ್ರಿಯ ಹೆಸರು ಚಲಾವಣೆಯಾಗಲು ಪ್ರಾರಂಭಿಸಿದಾಗಲೂ... ಶಾಸಕರು ಅವರ ಬಣ ಸೇರದಿರಲು ಕಾರಣವೇನು' ಎಂದು ಅವರು ಹೇಳಿದರು.
'ಸತ್ಯವನ್ನು ಸ್ವೀಕರಿಸಿ, ಸತ್ಯಕ್ಕೆ ಯಾವುದೇ ಪರ್ಯಾಯವಿಲ್ಲ ಮತ್ತು ಪೈಲಟ್ 2020ರ ಬಿಕ್ಕಟ್ಟಿನ ಸಂದರ್ಭದಲ್ಲಿ ತಪ್ಪುಗಳನ್ನು ಮಾಡಿದ್ದಾರೆ ಮತ್ತು ಅವುಗಳನ್ನು ಒಪ್ಪಿಕೊಳ್ಳಬೇಕು. ಹಿಂದಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪಕ್ಷವು ಒಗ್ಗಟ್ಟಿನಿಂದ ಇರಬೇಕು. ತಾನು ಯಾವುದೇ ಸ್ಥಾನ ಅಥವಾ ಹುದ್ದೆಯನ್ನು ಬೆನ್ನಟ್ಟುತ್ತಿಲ್ಲ. ಆದರೆ, ಯಾವುದೇ ಹುದ್ದೆಯು ನನ್ನನ್ನು ಹುಡುಕಿ ಬಂದರೆ ಅದು ಬೇರೆ ವಿಷಯ. ಅದನ್ನು ಸ್ವೀಕರಿಸುವುದನ್ನು ನಾನು ತಳ್ಳಿಹಾಕುವುದಿಲ್ಲ' ಎಂದು ಗೆಹ್ಲೋಟ್ ತಿಳಿಸಿದರು.
ಜೋಧಪುರದಲ್ಲಿ ಶೇಖಾವತ್, ಪೈಲಟ್ಗೆ ಹೊಸ ಹುದ್ದೆ ಸಿಗಲಿರುವುದಕ್ಕೆ ಗೆಹ್ಲೋಟ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ ನಂತರ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಟೀಕಿಸಿದ ಅಶೋಕ್ ಗೆಹ್ಲೋಟ್, 'ಶೇಖಾವತ್ ಒಬ್ಬ ಚಿಂತಿತ ವ್ಯಕ್ತಿ. ಅವರು ಎಷ್ಟು ದಿನ ಸಚಿವರಾಗಿ ಉಳಿಯುತ್ತಾರೋ ತಿಳಿದಿಲ್ಲ. ನಮ್ಮ ಬಗ್ಗೆ ಮಾತನಾಡುವ ಬದಲು ಅವರು ತಮ್ಮ ಸಚಿವ ಸ್ಥಾನವನ್ನು ರಕ್ಷಿಸಿಕೊಳ್ಳುವತ್ತ ಗಮನಹರಿಸಬೇಕು' ಎಂದು ಹೇಳಿದರು.
2020ರ ಮಾನೇಸರ್ ಘಟನೆಗೂ ಶೇಖಾವತ್ ಅವರಿಗೂ ಸಂಬಂಧವಿದೆ ಎಂದು ಆರೋಪಿಸಿದ ಅವರು, 'ಅವರು ಮಾನೇಸರ್ ಘಟನೆಯಲ್ಲೂ ಭಾಗಿಯಾಗಿದ್ದರು. ತಮ್ಮ ಸರ್ಕಾರವನ್ನು ಉರುಳಿಸುವ ಪಿತೂರಿಗೆ ಸಂಬಂಧಿಸಿದ ಸಭೆಗಳು ಕೇಂದ್ರ ಸಚಿವ ಧರ್ಮೇಂದ್ರ ಸಿಂಗ್ ಪ್ರಧಾನ್ ಅವರ ನಿವಾಸಗಳಲ್ಲಿ ನಡೆದವು ಎಂದು ದೂರಿದರು.