ವಿಶಾಖಪಟ್ಟಣಂ: ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್(ವಿಶಾಖಪಟ್ಟಣ ಉಕ್ಕು ಸ್ಥಾವರ)ನಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ಖಾಯಂ ಉದ್ಯೋಗಿಗಳ ಕುಟುಂಬಗಳಿಗೆ ತಲಾ 1.72 ಕೋಟಿ ರೂ. ಪರಿಹಾರವನ್ನು ನೀಡಲಾಗುವುದು ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿಯ ಕುಟುಂಬಕ್ಕೆ ತಲಾ 45.75 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಂಗಳವಾರ ಘೋಷಿಸಿದ್ದಾರೆ.
ಸೋಮವಾರ ಸಂಜೆ ಕ್ರೇನ್ ಮೂಲಕ ಸಾಗಿಸುತ್ತಿದ್ದ ಕುದಿಯುತ್ತಿದ್ದ ಕರಗಿದ ಉಕ್ಕು ಕಾರ್ಮಿಕರ ಮೇಲೆ ಬಿದ್ದು ಎಂಟು ಕಾರ್ಮಿಕರು ಸಜೀವ ದಹನವಾಗಿದ್ದರು.
ಈ ಪರಿಹಾರ ಪ್ಯಾಕೇಜ್, ಮೃತ ಉದ್ಯೋಗಿಗಳಿಗೆ ಬರಬೇಕಾದ ಎಲ್ಲಾ ಶಾಸನಬದ್ಧ ಮತ್ತು ಅಂತಿಮ ಪ್ರಯೋಜನಗಳನ್ನು ಒಳಗೊಂಡಿರುತ್ತದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.
"ಸರ್ಕಾರದ ಕಡೆಯಿಂದ, ಮೃತ ಖಾಯಂ ಉದ್ಯೋಗಿಗಳ ಕುಟುಂಬಗಳಿಗೆ ತಲಾ 1.72 ಕೋಟಿ ರೂ. ಪರಿಹಾರ ನೀಡಲಾಗುವುದು ಮತ್ತು ಗುತ್ತಿಗೆ ಸಿಬ್ಬಂದಿಗೆ ತಲಾ 45.75 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಅವರ ಅರ್ಹವಾದ ಪ್ರಯೋಜನಗಳ ಜೊತೆಗೆ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಎಕ್ಸ್ ಗ್ರೇಷಿಯಾ ಪಾವತಿಯನ್ನು ಸಹ ನೀಡಲಾಗುವುದು" ಎಂದು ಪವನ್ ಕಲ್ಯಾಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತರ ಕುಟುಂಬದವರಲ್ಲಿ ಒಬ್ಬರಿಗೆ ಉದ್ಯೋಗ ಸಹ ನೀಡಲಾಗುವುದು ಮತ್ತು ತೀವ್ರವಾಗಿ ಗಾಯಗೊಂಡ ಕಾರ್ಮಿಕರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.
ಗಾಯಗೊಂಡ ಕಾರ್ಮಿಕರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಆರ್ಐಎನ್ಎಲ್ ಭರಿಸಲಿದೆ ಎಂದು ಡಿಸಿಎಂ ತಿಳಿಸಿದರು.
ಉಕ್ಕು ಸ್ಥಾವರ ನೌಕರರ ಮಕ್ಕಳ ಶಿಕ್ಷಣವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ಮೃತ ಕಾರ್ಮಿಕರ ಮಕ್ಕಳಿಗೂ ಅದೇ ಪ್ರಯೋಜನವನ್ನು ವಿಸ್ತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಮೃತ ಉದ್ಯೋಗಿ ನಿವೃತ್ತಿ ಹೊಂದುವ ದಿನಾಂಕದವರೆಗೆ ಮೃತರ ಸಂಬಂಧಿಕರಿಗೆ ಉಕ್ಕಿನ ಸ್ಥಾವರದ ಕ್ವಾರ್ಟರ್ಸ್ನಲ್ಲಿ ಉಳಿಯಲು ಅವಕಾಶವಿರುತ್ತದೆ ಎಂದು ಪವನ್ ಕಲ್ಯಾಣ್ ತಿಳಿಸದ್ದಾರೆ.