ಗುರುಗ್ರಾಮ: ಕೆಲವೊಮ್ಮೆ ನಾವು ತಮಾಷೆಗಾಗಿ ಮಾಡುವ ಕೆಲಸಗಳೇ ದುಬಾರಿಯಾಗಿ ಪರಿಣಮಿಸುತ್ತವೆ ಎಂಬುದಕ್ಕೆ ಗುರುಗ್ರಾಮದ ಈ ಪ್ರಕರಣ ಹೊಸ ನಿದರ್ಶನವಾಗಿದೆ.
ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಹೇಳಿದ ಒಂದು ಮಾತು ಇದೀಗ ಯುವಕನೊಬ್ಬನ ಉದ್ಯೋಗವನ್ನೇ ಕಸಿದುಕೊಂಡಿದ್ದು, ಮಾತ್ರವಲ್ಲದೇ ದೇಶಾದ್ಯಂತ ಈ ವಿಚಾರದ ಬಗ್ಗೆ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದೆ.
ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಂಗ್ರಾ (Himanshu Jangra) ಹಾಸ್ಯ ಕಲಾವಿದ ಪ್ರಣಿತ್ ಮೋರೆ (Pranit More) ಅವರ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರ ಕೆಲಸಕ್ಕೇ ಕುತ್ತು ತಂದಿದೆ.
ಮಾತ್ರವಲ್ಲದೇ ಹಿಮಾಂಶು ಜಂಗ್ರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಈಗ ಆ ವಿವಾದದ ಪರಿಣಾಮವಾಗಿ ಅವರು ತಮ್ಮ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಖ್ಯಾತ ಸ್ಟ್ಯಾಂಡಪ್ ಕಮಿಡಿಯನ್ ಪ್ರಣಿತ್ ಮೋರೆ ಅವರ ಲೈವ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗೆ ನಡೆಸಿದ ಸಂವಾದದ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿಮಾಂಶು ಜಂಗ್ರಾ ಎಂಬಾತ ತನ್ನ ಡೇಟಿಂಗ್ ಅನುಭವವೊಂದನ್ನು ಹಂಚಿಕೊಂಡಿದ್ದ. ಆ ಸಂದರ್ಭದಲ್ಲಿ ಆತ ಒಬ್ಬ ಮಹಿಳೆಯೊಂದಿಗೆ ಡೇಟ್ಗೆ ಹೋಗಿದ್ದಾಗ 370 ಮೌಲ್ಯದ ಚಿಕನ್ ಬಿರಿಯಾನಿ ಖರೀದಿಸಿದ್ದಾಗಿ ಹೇಳಿದ್ದ.
ಮಾತು ಅಷ್ಟಕ್ಕೇ ಸೀಮಿತವಾಗಿದ್ದರೆ ಇಷ್ಟೊಂದು ದೊಡ್ಡ ವಿವಾದವಾಗುತ್ತಿರಲಿಲ್ಲ. ಆದರೆ ಆತ ತನ್ನ ಮಾತು ಮುಂದುವರೆಸಿ, ಬಳಿಕ, ತಾನು ಬಿರಿಯಾನಿ ಬದಲಾಗಿ ಆಕೆಯಿಂದ ಏನಾದರೂ ಪ್ರತಿಫಲವನ್ನು ನಿರೀಕ್ಷಿಸಿದ್ದೆ ಎಂದು ಹೇಳಿ ಆಕೆಯೊಂದಿಗಿನ ಖಾಸಗಿ ಕ್ಷಣಗಳ ವಿವರಿಸಿದ್ದ. ಅಲ್ಲದೆ 370 ರೂ ನೀಡಿ ಬಿರಿಯಾನಿ ಕೊಡಿಸಿದ್ದಕ್ಕೂ ಫಲ ದೊರೆಯಿತು. ಫುಲ್ ಪೈಸಾ ವಸೂಲಿಯಾಯ್ತು ಎಂದು ವ್ಯಂಗ್ಯವಾಗಿ ಹೇಳಿದ್ದ. ಈ ಕುರಿತ ವಿಡಿಯೋಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವ್ಯಾಪಕ ಆಕ್ರೋಶ
ಇನ್ನು ಹಿಮಾಂಶು ಜಂಗ್ರಾ ರ ಈ ಹೇಳಿಕೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಊಟಕ್ಕೆ ಹಣ ಖರ್ಚು ಮಾಡಿದರೆ ಮಹಿಳೆಯ ಮೇಲೆ ಯಾವುದೇ ಬಾಧ್ಯತೆ ಅಥವಾ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸಾವಿರಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದರು.
ಕಂಪನಿಯ ಮೇಲೂ ಒತ್ತಡ
ವಿವಾದ ತೀವ್ರವಾಗುತ್ತಿದ್ದಂತೆ ಜನರ ಗಮನ ಜಂಗ್ರಾ ಕೆಲಸ ಮಾಡುತ್ತಿದ್ದ ಆತನ ಸಂಸ್ಥೆಯ ಮೇಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುಗ್ರಾಮ್ ಮೂಲದ ಬ್ರ್ಯಾಂಡಿಂಗ್ ಮತ್ತು ಸೋಶಿಯಲ್ ಮೀಡಿಯಾ ಸಂಸ್ಥೆ Starvik Designಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಸಂದೇಶಗಳು, ಇಮೇಲ್ಗಳು ಮತ್ತು ಕರೆಗಳು ಹರಿದು ಬರಲಾರಂಭಿಸಿವೆ. ಹಿಮಾಂಶು ಜಂಗ್ರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಕೆಲಸದಿಂದ ಕಿತ್ತೊಗೆದ ಸಂಸ್ಥೆ
ಸಂಸ್ಥೆಗೆ ಸಾವಿರಾರು ಮೇಲ್ ಗಳು ಬರುತ್ತಿದ್ದು, ಸಂಸ್ಥೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈಕುರಿತು ಸಾವಿರಾರು ಕಮೆಂಟ್ ಗಳು ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸ್ಟಾರ್ವಿಕ್ ಡಿಸೈನ್ ಸಂಸ್ಥೆ ತನ್ನ ಉದ್ಯೋಗಿ ಹಿಮಾಂಶು ಜಂಗ್ರಾನನ್ನು ಕೆಲಸದಿಂದ ಕಿತ್ತೊಗೆದಿದೆ. ಈ ಕುರಿತು ಸಂಸ್ಥೆಯ ಸ್ಥಾಪಕ ವಿವೇಕ್ ವಿಶ್ವಕರ್ಮ (Vivek Vishwakarma) ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಪ್ರತಿಕ್ರಿಯಿಸಿದರು.
ಅವರು, ಜಂಗ್ರಾ ಅವರ ಹೇಳಿಕೆಗಳು ಸಂಸ್ಥೆಯ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ, ಈ ವಿವಾದ ಸಂಸ್ಥೆಯ ಉದ್ಯೋಗಿಗಳು, ಗ್ರಾಹಕರು ಮತ್ತು ಕೆಲಸದ ವಾತಾವರಣದ ಮೇಲೆಯೂ ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಹಿಮಾಂಶು ಜಂಗ್ರಾ ಅವರೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಕೈಗೊಂಡಿತು. ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಿದರು.
ಅಲ್ಲದೆ, ಕೇವಲ 22 ವರ್ಷದ ಯುವಕನಾಗಿರುವ ಹಿಮಾಂಶು ಜಂಗ್ರಾ ಈ ಘಟನೆಯ ಪರಿಣಾಮಗಳನ್ನು ಬಹಳ ಕಾಲ ಎದುರಿಸಬೇಕಾಗಬಹುದು ಎಂದೂ ವಿಶ್ವಕರ್ಮ ಅಭಿಪ್ರಾಯಪಟ್ಟರು.
ಭಿನ್ನ ಪ್ರತಿಕ್ರಿಯೆಗಳು
ಇನ್ನು ಸಂಸ್ಥೆಯ ಈ ವಜಾ ಪ್ರಕ್ರಿಯೆಗೂ ನೆಟ್ಟಿಗರು ಪರ-ವಿರೋಧ ಕಮೆಂಟ್ ಮಾಡುತ್ತಿದ್ದು, ಹಿಮಾಂಶು ಜಂಗ್ರಾ ಅವರನ್ನು ವಜಾಗೊಳಿಸುವ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ. ಆದರೆ ಮತ್ತೆ ಕೆಲವರು ಈ ನಡೆಯನ್ನು ವಿರೋಧಿಸಿದ್ದು, ಜನರು ತಮ್ಮ ತಪ್ಪುಗಳಿಂದ ಕಲಿಯಲು, ಕ್ಷಮೆಯಾಚಿಸಲು ಮತ್ತು ಬದಲಾಗಲು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಮತ್ತೆ ಕೆಲವರು 2ನೇ ಅವಕಾಶ ಕೊಡಲೇಬಾರದು. ಇದು ಮತ್ತೊಬ್ಬರಿಗೆ ಪಾಠವಾಗಬೇಕು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಸಮ್ಮತಿ ಮತ್ತು ಡೇಟಿಂಗ್ ಸಂಸ್ಕೃತಿ
ಈ ವಿವಾದ ಈಗ 370 ಬಿರಿಯಾನಿಯ ವಿಚಾರವನ್ನು ಮೀರಿ ಬಹಳ ದೊಡ್ಡ ಚರ್ಚೆಯಾಗಿ ಬೆಳೆದಿದ್ದು, ಡೇಟಿಂಗ್ ಸಂಬಂಧಗಳಲ್ಲಿ ಹಣ ಖರ್ಚು ಮಾಡಿದರೆ ಎದುರಿನ ವ್ಯಕ್ತಿಯಿಂದ ಏನಾದರೂ ನಿರೀಕ್ಷಿಸುವ ಮನೋಭಾವ, ಸಮ್ಮತಿ (consent), ಮಹಿಳೆಯರ ಬಗ್ಗೆ ಇರುವ ದೃಷ್ಟಿಕೋನ ಮತ್ತು ಸಾಮಾಜಿಕ ಜಾಲತಾಣಗಳ ನ್ಯಾಯಾಂಗದಂತಹ ಪಾತ್ರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಅನೇಕರ ಪ್ರಕಾರ, ಹಣ ಖರ್ಚು ಮಾಡಿದ ಕಾರಣಕ್ಕೆ ಯಾರ ಮೇಲೂ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ ಎಂಬುದೇ ಈ ವಿವಾದದ ಪ್ರಮುಖ ಸಂದೇಶ.