ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ನಗರದ ಮಾಲ್ ಬಳಿ ರಸ್ತೆಯಲ್ಲಿ ಉಗುಳಬೇಡಿ ಎಂದು ಬುದ್ಧಿ ಹೇಳಿದ 70 ವರ್ಷದ ವೃದ್ಧನ ಆಟೋ ಚಾಲಕನೊಬ್ಬ ಹಿಗ್ಗಾಮುಗ್ಗ ಥಳಿಸಿದ್ದಾನೆ.
ವೃದ್ಧನ ಮೇಲೆ ನಿರ್ದಯವಾಗಿ ಮತ್ತು ಕ್ರೂರವಾಗಿ ಹಲ್ಲೆ ನಡೆಸಿದ ಆಟೋ ಚಾಲಕನನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಿವಿಯಾನಾ ಮಾಲ್ ಬಳಿಯ ಜುಪಿಟರ್ ಆಸ್ಪತ್ರೆಯ ಹೊರಗೆ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ನಂತರ, ಆರೋಪಿಯನ್ನು ಬಂಧಿಸಲಾಗಿದೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಸರೋಷ್ ದಸ್ತೂರ್ ಎಂಬ ವೃದ್ಧ ತನ್ನ ಪತ್ನಿಯೊಂದಿಗೆ ಮಾಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಆಟೋ ಚಾಲಕ ರಸ್ತೆಯಲ್ಲಿ ಉಗುಳುತ್ತಿರುವುದನ್ನು ಗಮನಿಸಿದ್ದಾರೆ.
ದಸ್ತೂರ್ ಅವರು, ಆ ಚಾಲಕನಿಗೆ ಈ ರೀತಿ ರಸ್ತೆಯಲ್ಲಿ ಉಗುಳಬೇಡಿ ಎಂದು ಬುದ್ಧಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ನಿಶಾಂತ್ ಧರ್ ಶುಕ್ಲಾ, ವೃದ್ಧನನ್ನು ನಿಂದಿಸಿ ಥಳಿಸಿದ್ದಾರೆ. ಅಲ್ಲದೆ ಆಟೋ ಚಾಲಕ ಜೋರಾಗಿ ತಳ್ಳಿದ್ದರಿಂದ ಕೆಳಗೆ ಬಿದ್ದ ವೃದ್ಧನ ಕಾಲಿನ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಥಾಣೆಯ ಶಾಸಕರೂ ಆಗಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನದ ಆರೋಪ ಹೊರಿಸುವಂತೆ ನಗರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.