ಕೋಝಿಕೋಡ್: ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರು ಶನಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ನಿಲುವನ್ನು ಟೀಕಿಸಿದ್ದು, ಅವರಿಂದಲೇ ಇಂಡಿಯಾ (INDIA) ಮೈತ್ರಿಕೂಟ ದುರ್ಬಲವಾಗಿ ಬಿಜೆಪಿಗೆ ನೆರವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಕೇರಳದಲ್ಲಿನ ರಾಜಕೀಯ ಪೈಪೋಟಿಯ ಕಾರಣದಿಂದ ವಿಜಯನ್ ಅವರನ್ನು ಅಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂಬ ವರದಿಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 'ಯಾರು ಯಾರನ್ನು ಅಪ್ಪಿಕೊಳ್ಳುತ್ತಾರೆ ಎಂಬುದರ ಬಗ್ಗೆ ತಮಗೆ ಚಿಂತೆಯಿಲ್ಲ ಎಂದು ವ್ಯಂಗ್ಯ ಮಾಡಿದರು.
ಅವರ ಅಪ್ಪುಗೆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಯನ್ನು ಅಪ್ಪಿಕೊಳ್ಳುತ್ತಿರುವ ಛಾಯಾಚಿತ್ರವನ್ನು ನಾವೆಲ್ಲರೂ ನೋಡಿದ್ದೇವೆ. ಮೋದಿಯನ್ನು ಅಪ್ಪಿಕೊಂಡ ಕ್ರಿಯೆಯ ಬಗ್ಗೆ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಅವರ ಈ ಹೇಳಿಕೆ ಒಂದು ನಿರ್ದಿಷ್ಟ ರಾಜಕೀಯ ಸಂದೇಶವನ್ನು ನೀಡುತ್ತದೆ. ಇದು ರಾಹುಲ್ ಗಾಂಧಿಯವರ ರಾಜಕೀಯ ದೃಷ್ಟಿಕೋನವನ್ನು ಹಾಗೂ ಅವರು ಇಂಡಿಯಾ ಮೈತ್ರಿಕೂಟವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ” ಎಂದು ವಿಜಯನ್ ಹೇಳಿದರು.
ಅಂತೆಯೇ ಈ ವಿಷಯದ ಬಗ್ಗೆ ವಿವರವಾದ ಚರ್ಚೆ ಅಗತ್ಯವಿದೆ ಎಂದು ಹೇಳಿದ ಹಿರಿಯ ಸಿಪಿಐ(ಎಂ) ನಾಯಕರು, ಸದ್ಯಕ್ಕೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
“ಇಂದು ಇಂಡಿಯಾ ಮೈತ್ರಿಕೂಟ ಒಂದು ನಿರ್ದಿಷ್ಟ ಹಂತವನ್ನು ತಲುಪಿದೆ. ಸಭೆಯಲ್ಲಿ ನಾವು ಮಾತ್ರವಲ್ಲ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಹಾಗೂ ಇತರ ಪ್ರಮುಖ ಕಾಂಗ್ರೆಸ್ಸೇತರ ಪಕ್ಷಗಳ ನಾಯಕರು ಸಹ ಕಾಂಗ್ರೆಸ್ನ ನಿಲುವಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಈಗ ಡಿಎಂಕೆ ಯಾವ ನಿಲುವಿನಲ್ಲಿ ನಿಂತಿದೆ ಎಂಬುದನ್ನು ಜನರು ನೋಡಬಹುದು ಎಂದರು.
ಬಿಜೆಪಿಗೆ ನೆರವು
“ಇಂದಿನ ಪರಿಸ್ಥಿತಿಯನ್ನು ಕಾಂಗ್ರೆಸ್ನ ನಿಲುವು, ವಿಶೇಷವಾಗಿ ರಾಹುಲ್ ಗಾಂಧಿಯವರ ನಿಲುವೇ ಸೃಷ್ಟಿಸಿದೆ. ವಾಸ್ತವವಾಗಿ, ಈ ರೀತಿಯ ನಿಲುವು ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದಿಲ್ಲ. ನಾನು ಹಿಂದೆ ಹೇಳಿದಂತೆ, ಇದು ಅನೇಕ ಬಾರಿ ಬಿಜೆಪಿಗೆ ಸಹಾಯ ಮಾಡುತ್ತದೆ.
ಇಂತಹ ಕ್ರಮಗಳ ಮೂಲಕ ರಾಹುಲ್ ಗಾಂಧಿ ಅವರು ಬಿಜೆಪಿಯ ಹಿತಾಸಕ್ತಿಗಳಿಗೆ ಅನುಕೂಲವಾಗುವ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಪರಿಣಾಮವಾಗಿ, ಅವರು ಬಿಜೆಪಿಗೆ ನೆರವಾಗುವವರಾಗಿ ಕಾಣಿಸಿಕೊಳ್ಳುತ್ತಾರೆ” ಎಂದು ವಿಜಯನ್ ಹೇಳಿದರು.