ಗುವಾಹತಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರುತ್ತಲೇ ಮತ್ತೆ ಅಕ್ರಮ ಬಾಂಗ್ಲಾದೇಶಿಯರ ಸಮಸ್ಯೆ ತಾರಕಕ್ಕೇರಿದ್ದು, ದೇಶದಲ್ಲಿರುವ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಅವರ ತವರು ದೇಶಕ್ಕೆ ರವಾನಿಸುವ ಕಾರ್ಯ ನಡೆಯುತ್ತಿರುವಂತೆಯೇ ಇತ್ತ ಬಾಂಗ್ಲಾದೇಶ ತನ್ನದೇ ಪ್ರಜೆಗಳನ್ನು ದೇಶದೊಳಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದೆ.
ಹೌದು.. ಅಸ್ಸಾಂನ ಮಂಕಾಚಾರ್ ಪ್ರದೇಶದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಒಂಬತ್ತು ಮಂದಿ ಬಾಂಗ್ಲಾದೇಶಿ ನಾಗರಿಕರು ‘ನೋ-ಮ್ಯಾನ್ಸ್ ಲ್ಯಾಂಡ್’ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆ ಹೊಸ ಉದ್ವಿಗ್ನತೆ ಉಂಟಾಗಿದೆ. ಒಂಬತ್ತು ಮಂದಿ ಬಾಂಗ್ಲಾದೇಶಿ ನಾಗರಿಕರು ಎರಡೂ ದೇಶಗಳ ನಡುವಿನ ‘ನೋ-ಮ್ಯಾನ್ಸ್ ಲ್ಯಾಂಡ್’ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (BGB) ತನ್ನದೇ ದೇಶದ ನಾಗರಿಕರನ್ನು ಸ್ವೀಕರಿಸಲು ನಿರಾಕರಿಸುತ್ತಿದೆ. ಈ ಸಮಸ್ಯೆ ಬಗೆಹರಿಸಲು ಗಡಿ ಭದ್ರತಾ ಪಡೆ (BSF) ಮತ್ತು BGB ಅಧಿಕಾರಿಗಳ ನಡುವೆ ಧ್ವಜ ಸಭೆ (Flag Meeting) ನಡೆಯಿತು. ಆದರೆ ಸಭೆಯಿಂದ ಯಾವುದೇ ಪರಿಹಾರ ಹೊರಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು BSF ಮೂಲಗಳು ತಿಳಿಸಿವೆ.
ಗಡಿಯಲ್ಲಿ ಹೊಸ ಉದ್ವಿಗ್ನತೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಅವರಲ್ಲಿ ಒಬ್ಬರು ತಾವು ಬಾಂಗ್ಲಾದೇಶದ ನಾಗರಿಕರು ಮತ್ತು ಉದ್ಯೋಗಕ್ಕಾಗಿ ಭಾರತಕ್ಕೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. “ನಾವು ಬಾಂಗ್ಲಾದೇಶದವರೇ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ನಮ್ಮ ಬಳಿ ಇವೆ. ನಮ್ಮನ್ನು ಕೊಂದು ನದಿಗೆ ಎಸೆದರೂ ನಾವು ಭಾರತಕ್ಕೆ ಹೋಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇನ್ನೂ ಹಲವಾರು ವಿಡಿಯೋಗಳಲ್ಲಿ ಅವರು ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯಿಂದ ಅಳುತ್ತಿರುವ ದೃಶ್ಯಗಳು ಕಂಡುಬಂದಿವೆ. ಇತ್ತೀಚೆಗೆ ಭಾರತ ಗಡಿಯನ್ನು ಅಕ್ರಮವಾಗಿ ದಾಟಲು ಯತ್ನಿಸಿದ್ದ ಹಲವು ಬಾಂಗ್ಲಾದೇಶಿ ನಾಗರಿಕರನ್ನು BSF ಹಿಮ್ಮೆಟ್ಟಿಸಿತ್ತು. ಕಳೆದ ಒಂದು ವಾರದಲ್ಲಿ ಅಸ್ಸಾಂ ಪೊಲೀಸ್ ಮತ್ತು BSF ಸೇರಿ 21 ಒಳನುಸುಳುಕರನ್ನು ತಡೆದಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಅಕ್ರಮ ನುಸುಳುವಿಕೆಯನ್ನು ತಡೆಯುವಲ್ಲಿ ಅಸ್ಸಾಂ ಪೊಲೀಸ್ ಮತ್ತು BSF ವಹಿಸಿದ ಪಾತ್ರವನ್ನು ಶ್ಲಾಘಿಸಿದ್ದಾರೆ.
ಭಾನುವಾರ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಅವರು, 'ಗಡಿಗಳ ರಕ್ಷಣೆ, ಭದ್ರತೆಯ ಬಲವರ್ಧನೆ. ಅಸ್ಸಾಂ ಪೊಲೀಸ್ ಮತ್ತು BSF ಜಂಟಿಯಾಗಿ ನಡೆಸಿದ ಅತ್ಯುತ್ತಮ ಕಾರ್ಯಾಚರಣೆಯಲ್ಲಿ 21 ಒಳನುಸುಳುಕರನ್ನು ತ್ವರಿತವಾಗಿ ಗುರುತಿಸಿ ಭಾರತ ಪ್ರವೇಶಿಸದಂತೆ ತಡೆಯಲಾಗಿದೆ. ನಮ್ಮ ಗಡಿರಕ್ಷಣೆಯ ಬಹುಮುಖ ಕಾರ್ಯತಂತ್ರ ಮುಂದುವರಿಯುತ್ತಿದೆ. ಅಲ್ಲದೆ, ಬಾಂಗ್ಲಾದೇಶದಿಂದ ಆಗುವ ಅಕ್ರಮ ನುಸುಳುವಿಕೆಯಿಂದ ಅಸ್ಸಾಂ ರಾಜ್ಯವನ್ನು ಮುಕ್ತವಾಗಿಡುವ ಹಾಗೂ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ ನೆರೆಯ ರಾಜ್ಯಗಳ ಗಡಿಗಳನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಅಗತ್ಯವಿದೆ' ಎಂದು ಹೇಳಿದ್ದಾರೆ.