ಮುಂಬೈ: ಶಿವಸೇನೆ(ಯುಬಿಟಿ)ಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ಏಕನಾಥ್ ಶಿಂಧೆ ಬಣದ ಶಿವಸೇನೆ ಸೇರುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಅವರ ಧಾರಾಶಿವ ಕ್ಷೇತ್ರದ ಕಾರ್ಯಕರ್ತರು ಪಕ್ಷವನ್ನು ತೊರೆಯುವವರ ಮುಖಕ್ಕೆ ಹಸುವಿನ ಸಗಣಿ ಬಳಿಯುವುದಾಗಿ ಎಚ್ಚರಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ತ್ಯಜಿಸುವವರನ್ನು ಧಾರಾಶಿವದಲ್ಲಿ ಬಹಿರಂಗವಾಗಿ ಓಡಾಡಲು ಬಿಡುವುದಿಲ್ಲ ಎಂದು ಸೇನಾ-ಯುಬಿಟಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
''ಅವರು ಪಕ್ಷ ಬಿಡಲು ನಿರ್ಧರಿಸಿದರೆ, ವಿಧಾನಸಭೆ ಮತ್ತು ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಯನ್ನು ಗೆಲ್ಲಲು ನಾವು ಅವರಿಗೆ ಬಿಡುವುದಿಲ್ಲ. "ನಮ್ಮ ಪಕ್ಷವು ಅವರನ್ನು ದೊಡ್ಡವರನ್ನಾಗಿ ಮಾಡಿದೆ ಮತ್ತು ರಾಜ್ಯಾದ್ಯಂತ ಅವರಿಗೆ ಒಂದು ಸ್ಥಾನಮಾನ ನೀಡಿದೆ" ಎಂದು ಸೇನಾ (ಯುಬಿಟಿ) ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಅವರು ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡರೆ, ಅದು ಪಕ್ಷದ ಕಾರ್ಯಕರ್ತರಿಗೆ ಅತ್ಯಂತ ನೋವಿನ ಸಂಗತಿ ಎಂದು ಅವರು ತಿಳಿಸಿದರು.
ಹಲವಾರು ಶಿವಸೇನೆ(ಯುಬಿಟಿ) ಸಂಸದರು ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾಗಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವುದರ ನಡುವೆ, ಶಿವಸೇನೆ(ಯುಬಿಟಿ)ಯ ಹಿರಿಯ ನಾಯಕರು ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಯಾವುದೇ ಕಾನೂನುಬಾಹಿರ ಪಕ್ಷಾಂತರವನ್ನು ತಡೆಯುವಂತೆ ಒತ್ತಾಯಿಸಿದ್ದರು.