ನವದಹಲಿ: 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ಆಘಾತ ಎದುರಾಗುವ ಮುನ್ಸೂಚನೆಗಳು ಸಿಗುತ್ತಿದೆ.
ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ ಅವರು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜವಾದಿ ಪಕ್ಷದ 25-26 ಸಂಸದರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಆದರೆ, ನಾವು ಅವರನ್ನು ಒಡೆಯುತ್ತಿಲ್ಲ. ಅವರು ತಾವಾಗಿಯೇ ಪಕ್ಷ ತೊರೆಯಲಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆಗಳು ಉತ್ತರ ಪ್ರದೇಶ ಸಚಿವ ಹಾಗೂ ಸುಹೇಲದೇವ್ ಭಾರತೀಯ ಸಮಾಜ ಪಕ್ಷ (SBSP) ನಾಯಕ ಓಂ ಪ್ರಕಾಶ್ ರಾಜ್ಭರ್ ಇತ್ತೀಚೆಗೆ ಮಾಡಿದ್ದ ಸ್ಫೋಟಕ ಹೇಳಿಕೆಗಳ ಬೆನ್ನಲ್ಲೇ ಬಂದಿವೆ.
ಸಮಾಜವಾದಿ ಪಕ್ಷದಲ್ಲಿ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆ ನಡೆಯಲಿದ್ದು, ಪಕ್ಷ ವಿಭಜನೆ ಅನಿವಾರ್ಯ ಎಂದು ಅವರು ಹೇಳಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, "ಸಮಾಜವಾದಿ ಪಕ್ಷದ ಅಸಮಾಧಾನಿತ ಸಂಸದರ ಬಂಡಾಯ ಗುಂಪಿಗೆ ಉತ್ತರ ಪ್ರದೇಶದ 'ಬಂಡಾಯದ ನೆಲ' ಎಂದು ಕರೆಯಲ್ಪಡುವ ಬಲ್ಲಿಯಾ ಜಿಲ್ಲೆಯ ಒಬ್ಬ ನಾಯಕ ನೇತೃತ್ವ ನೀಡಲಿದ್ದಾರೆ" ಎಂದು ಬರೆದಿದ್ದರು.
ಇದಲ್ಲದೆ, ಇತ್ತೀಚೆಗೆ ಎಸ್ಪಿ ಕಚೇರಿಯಲ್ಲಿ ನಡೆದ ಬ್ರಾಹ್ಮಣ ಸಮಾವೇಶದ ವೇಳೆ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪವನ್ನೂ ರಾಜ್ಭರ್ ಮಾಡಿದ್ದರು.
ಅಖಿಲೇಶ್ ಯಾದವ್ ಸಾಮಾಜಿಕ ಜಾಲತಾಣ ರಾಜಕಾರಣ ಬಿಟ್ಟು ಪಕ್ಷದ ಅಸಮಾಧಾನಿತ ಸಂಸದರ ಮನೆಗಳಿಗೆ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದೂ ಸಲಹೆ ನೀಡಿದ್ದರು. "ಟ್ವಿಟರ್ ರಾಜಕಾರಣ ಬಿಟ್ಟು ‘ಸಂಸದರನ್ನು ಉಳಿಸಿಕೊಳ್ಳಿ’ ಅಭಿಯಾನ ಆರಂಭಿಸಬೇಕು" ಎಂದು ವ್ಯಂಗ್ಯವಾಡಿದ್ದರು.
ಆದರೆ, ಈ ಎಲ್ಲಾ ಆರೋಪಗಳನ್ನು ಸಮಾಜವಾದಿ ಪಕ್ಷ ತಳ್ಳಿಹಾಕಿದೆ. ಬಿಜೆಪಿಯ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಎಸ್ಪಿ ಪಕ್ಷದಲ್ಲಿ ಭಿನ್ನಮತ ಕುರಿತ ಊಹಾಪೋಹಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.