ಮುಂಬೈ: ದೇಶದ ಪ್ರತಿಷ್ಠಿತ ಐಐಟಿ ಬಾಂಬೆ ಶಿಕ್ಷಣ ಸಂಸ್ಥೆಯಲ್ಲಿ ಚಿರತೆಯೊಂದು ನುಗ್ಗಿದ್ದು, ಸಂಸ್ಥೆಯ ಆವರಣದಲ್ಲಿದ್ದ ನಾಯಿಯೊಂದನ್ನು ಬೇಟೆಯಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಜೂನ್ 19 ಶುಕ್ರವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ, ಐಐಟಿ-ಬಾಂಬೆ (ಪವಾಯಿ) ಆವರಣದ ಸಿಬ್ಬಂದಿ ವಸತಿ ನಿಲಯದ ಪ್ರದೇಶದಲ್ಲಿ ಚಿರತೆಯೊಂದು ಬೀದಿ ನಾಯಿಯ ಮೇಲೆ ದಾಳಿ ನಡೆಸಿ ಕೊಂದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಆವರಣದ ಸುತ್ತಮುತ್ತ ಚಿರತೆಗಳ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಹೊಸ ಆತಂಕಕ್ಕೆ ಕಾರಣವಾಗಿದೆ.
ಪವಾಯಿಯಲ್ಲಿರುವ ಐಐಟಿ-ಬಾಂಬೆ ಆವರಣದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ನಿವಾಸಿಗಳು ಭಯಭೀತರಾಗಿದ್ದಾರೆ. ಸಿಬ್ಬಂದಿ ವಸತಿ ನಿಲಯದ ಪ್ರದೇಶದಲ್ಲೇ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಆವರಣದ ವಸತಿ ಪ್ರದೇಶಗಳ ಸಮೀಪ ಚಿರತೆಗಳ ಓಡಾಟ ಹೆಚ್ಚುತ್ತಿರುವ ಬಗ್ಗೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ವೀಡಿಯೊದಲ್ಲಿ ಮೊದಲು ಭಾರತೀಯ ಬೀದಿ ನಾಯಿಯೊಂದು ಮೆಟ್ಟಿಲುಗಳ ಸಮೀಪ ನಿಂತಿರುವುದು ಕಾಣಿಸುತ್ತದೆ. ಅದು ಅಸಹಜವಾಗಿ ವರ್ತಿಸುತ್ತಾ ತನ್ನ ಬಲಭಾಗದತ್ತ ಪದೇ ಪದೇ ನೋಡುತ್ತಿದ್ದು, ಸಮೀಪದಲ್ಲೇ ಅಪಾಯವಿರುವುದನ್ನು ಅರಿತಂತಿದೆ. ಕೆಲವೇ ಕ್ಷಣಗಳಲ್ಲಿ ಚಿರತೆಯೊಂದು ನಿಶ್ಶಬ್ದವಾಗಿ ಪ್ರವೇಶಿಸಿ ನಾಯಿಯತ್ತ ನಿಧಾನವಾಗಿ ಸಾಗುತ್ತದೆ.
ನಂತರ ಚಿರತೆ ಏಕಾಏಕಿ ನಾಯಿಯ ಮೇಲೆ ದಾಳಿ ನಡೆಸುತ್ತದೆ. ಈ ವೇಳೆ ನೋಡನೋಡುತ್ತಲೇ ನಾಯಿ ಮೇಲೆ ದಾಳಿ ಮಾಡಿ ನಾಯಿಯ ಕುತ್ತಿಗೆಗೆ ಬಾಯಿ ಹಾಕಿ ಗಟ್ಟಿಯಾಗಿ ಹಿಡಿಯುತ್ತದೆ. ನಾಯಿಯು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ, ಕ್ಷಣಿಕ ಹೋರಾಟದ ಬಳಿಕ ಚಿರತೆ ಅದರ ಕುತ್ತಿಗೆಯನ್ನು ಹಿಡಿದು ಬಿಗಿಯಾಗಿ ಕಚ್ಚಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಕೆಲವೇ ಸೆಕೆಂಡುಗಳಲ್ಲಿ ನಾಯಿಯು ಸಾವನ್ನಪ್ಪುತ್ತದೆ. ಬಳಿಕ ಚಿರತೆ ಅದರ ಮೃತದೇಹವನ್ನು ಎಳೆದುಕೊಂಡು ಕತ್ತಲೆಯೊಳಗೆ ಮಾಯವಾಗುತ್ತದೆ.
ಬೆಚ್ಚಿಬಿದ್ದ ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು
ಈ ಘಟನೆ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಆವರಣದಲ್ಲಿ ವಾಸಿಸುವ ಜನರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ಪವಾಯಿ ಪ್ರದೇಶವು ಅರಣ್ಯ ಪ್ರದೇಶಗಳಿಗೆ ಸಮೀಪದಲ್ಲಿರುವುದರಿಂದ ಈ ಹಿಂದೆ ಸಹ ಚಿರತೆ ಕಾಣಿಸಿಕೊಂಡಿರುವ ಘಟನೆಗಳು ವರದಿಯಾಗಿವೆ. ಆದರೆ ವಸತಿ ನಿಲಯಗಳ ಸಮೀಪವೇ ಇಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ.