ಕೋಲ್ಕತ್ತಾ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಈಗ ಇಬ್ಭಾಗವಾಗುತ್ತಿದ್ದು, ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರನ್ನೇ ಪಕ್ಷದಿಂದ ಹೊರ ಹಾಕಲಾಗಿದೆ.
ಬಂಗಾಳ ರಾಜಕೀಯವು ಸೋಮವಾರ ಮತ್ತೊಂದು ತಿರುವು ಪಡೆದುಕೊಂಡಿದ್ದು, ಉಲುಬೇರಿಯಾ ಪುರ್ಬಾ ಶಾಸಕ ರಿತಬ್ರತ ಬ್ಯಾನರ್ಜಿ ಅವರು ತಮ್ಮದೇ "ನಿಜವಾದ ತೃಣಮೂಲ ಕಾಂಗ್ರೆಸ್" ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕಿ ಮಮತಾ ಅವರನ್ನು ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ರಿತಬ್ರತ ಬ್ಯಾನರ್ಜಿ ಅವರನ್ನು ಪಕ್ಷದಿಂದ ಹೊರಹಾಕಿದ ಕೆಲವು ದಿನಗಳ ನಂತರ ಈಗ ದೀದಿಯನ್ನೇ ಉಚ್ಚಾಟಿಸಲಾಗಿದೆ.
ಇಂದು ನಡೆದ ವ್ಯತಿರಿಕ್ತ ಕ್ರಮದಲ್ಲಿ, "ನಿಜವಾದ ತೃಣಮೂಲ ಕಾಂಗ್ರೆಸ್" ಪಕ್ಷ ಹೊಸ ಸಮಿತಿಯನ್ನು ರಚಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರ ಮಾದರಿಯ ರಾಜಕೀಯ ದಂಗೆಯೊಂದು ಅಧಿಕೃತವಾಗಿ ಮುನ್ನೆಲೆಗೆ ಬಂದಿದೆ.
ಅರೂಪ್ ರಾಯ್ ಟಿಎಂಸಿ ನೂತನ ಅಧ್ಯಕ್ಷ
ಕೋಲ್ಕತಾದ ನ್ಯೂ ಟೌನ್ನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ದಿಕ್ಸೂಚಿ ಸಭೆ ನಡೆಯಿತು. ಈ ಸಭೆಯಲ್ಲಿ ಟಿಎಂಸಿಯ 60 ಶಾಸಕರು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ (KMC) 70 ಕೌನ್ಸಿಲರ್ಗಳು ಭಾಗವಹಿಸಿ ರಿತಬ್ರತಾ ಬಣಕ್ಕೆ ಜೈ ಎಂದಿದ್ದಾರೆ.
ಸಭೆಯಲ್ಲಿ ಮಮತಾ ಅವರನ್ನು ಉಚ್ಚಾಟಿಸಿ, ಅವರ ಜಾಗಕ್ಕೆ ಹೌರಾ ಮಧ್ಯಮ ಕ್ಷೇತ್ರದ ಶಾಸಕ ಅರೂಪ್ ರಾಯ್ ಅವರನ್ನು ತೃಣಮೂಲ ಕಾಂಗ್ರೆಸ್ನ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷದ ನಾಯಕರೂ ಆಗಿರುವ ರಿತಬ್ರತಾ ಬ್ಯಾನರ್ಜಿ, ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಪುನರ್ ರಚಿಸಬೇಕು. ಆದರೆ, 2022ರ ಫೆಬ್ರವರಿ ಬಳಿಕ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ. ಹಳೆಯ ಸಮಿತಿಯ ಅವಧಿ ಮುಗಿದಿದ್ದರಿಂದ ಪಕ್ಷದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಹೀಗಾಗಿ ನಾವು ನೂತನ ನಾಯಕತ್ವವನ್ನು ಆಯ್ಕೆ ಮಾಡಿದ್ದೇವೆ ಎಂದು ಘೋಷಿಸಿದ್ದಾರೆ.