ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಮುಂಬೈನಿಂದ ನಾಗ್ಪುರಕ್ಕೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ರಾಜಕೀಯ ಎದುರಾಳಿಗಳು ಪ್ರಯಾಣದ ವೇಳೆ ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಕೋರಿದ್ದಾರೆ.
ಉಭಯ ನಾಯಕರ ನಡುವೆ ಕಿರು ಸಂವಾದವೂ ನಡೆದಿದೆ. ಈ ಪೋಟೋಗಳು ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಊಹಾಪೋಹಗಳಿಗೂ ಕಾರಣವಾಯಿತು. ಆದಾಗ್ಯೂ, ಇದೊಂದು ಸೌಜನ್ಯಯುತ ನಡವಳಿಕೆ ಎಂದು ಉಭಯ ಬಣಗಳು ಹೇಳಿಕೊಂಡಿವೆ.
ಫಡ್ನವೀಸ್ ಪೂರ್ವ ನಿಗದಿತ ಸರ್ಕಾರ ಮತ್ತು ಪಕ್ಷದ ಕಾರ್ಯಕ್ರಮಗಳಿಗಾಗಿ ತಮ್ಮ ತವರು ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಈ ಮಧ್ಯೆ ಠಾಕ್ರೆ ವಿದರ್ಭ ಮತ್ತು ಮರಾಠವಾಡದ ಮೂರು ದಿನಗಳ ಪ್ರವಾಸವನ್ನು ಪ್ರಾರಂಭಿಸಲು ನಾಗ್ಪುರಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ, ಸಾಮಾನ್ಯ ವಿಮಾನ ಪ್ರಯಾಣ ಕೂಡ ಚರ್ಚಾಸ್ಪದ ವಿಷಯವಾಗಬಹುದು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ್ತು ಶಿವಸೇನೆ (ಯುಬಿಟಿ) ಶತ್ರುಗಳಂತೆ ಕಾದಾಡುತ್ತಿರುವುದರಿಂದ ಫಡ್ನವೀಸ್ ಮತ್ತು ಠಾಕ್ರೆ ನಡುವಿನ ಸರಳ ಹಸ್ತಲಾಘವ ಹೊಸ ಸುತ್ತಿನ ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ.